More

    ಸುರಂಗದಲ್ಲಿ ಯೋಗ, ವಾಕಿಂಗ್​… ಆರಂಭದ ದಿನಗಳಲ್ಲಿ ಬದುಕಿದ್ದೇ ಪವಾಡ; ಅನುಭವ ಹಂಚಿಕೊಂಡ ಕಾರ್ಮಿಕರು

    ಉತ್ತರಕಾಶಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು, 17 ದಿನ ತಾವು ಆ ವಾತಾವರಣದಲ್ಲಿ ಕಾಲ ಕಳೆದಿದ್ದು ಹೇಗೆ ಎಂಬುದರ ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದ್ದಾರೆ.

    “ಸುರಂಗದಲ್ಲಿ ಸಿಲುಕಿದ್ದ ಬಹುತೇಕರಿಗೆ ಬದುಕುವ ಆಸೆಯೇ ಕಮರಿ ಹೋಗಿತ್ತು’ ಎಂದು ಆ ಕಾರ್ಮಿಕರ ಪೈಕಿ ಒಬ್ಬನಾದ ರರ್ಖಂಡ್​ನ ಶ್ರಮಿಕ ಅನಿಲ್​ ಬೇಡಿಯಾ ಹೇಳಿದ್ದಾನೆ. “ದುರಂತದ ಆರಂಭದ ದಿನಗಳಲ್ಲಿ ಚುರುಮುರಿ ತಿಂದು ಹಾಗೂ ಬಂಡೆಗಳಿಂದ ಜಿನುಗುತ್ತಿದ್ದ ನೀರನ್ನು ಚೀಪಿ ದಿನ ತಳ್ಳಿದೆವು. ನಂತರ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಬರತೊಡಗಿದವು’ ಎಂದು ಕಾರ್ಮಿಕರು ಎದುರಿಸಿದ್ದ ಕರಾಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ.

    “ಯೋಗ ಮತ್ತು ಬೆಳಗಿನ ನಡಿಗೆಯ ಮೂಲಕ ಕಾರ್ಮಿಕರು ಧೃತಿಗೆಡದೆ ಚೈತನ್ಯವನ್ನು ಉಳಿಸಿಕೊಂಡಿದ್ದರು’ ಎಂದು ರಕ್ಷಣೆಗೊಂಡ ಕೆಲವೇ ಸಮಯದಲ್ಲಿ ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಮಿಕ ಸಬಾ ಅಹಮದ್​ ವಿವರಿಸಿದ್ದಾನೆ. ಶ್ರಮಜೀವಿಗಳ ಮನೋಸ್ಥೆ$ರ್ಯಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. “ನಾವು ಯಾವತ್ತೂ ಬದುಕುವ ಆಸೆಯನ್ನು ಕಳೆದುಕೊಳ್ಳಲಿಲ್ಲ’ ಎಂದು ಇನ್ನೊಬ್ಬ ಕಾರ್ಮಿಕ ವಿಶಾಲ್​ ಹೇಳಿದ್ದಾನೆ.

    ಮೊಬೈಲ್​ ವಾಲ್​ಪೇಪರ್​

    “ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸೋದರನೊಬ್ಬ ಆಗಾಗ ಹೇಳುತ್ತಿದ್ದ ಮಾತುಗಳು ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಷ್ಟೂ ದಿನ ಧೈರ್ಯದಿಂದಿರಲು ಪ್ರೇರಣೆಯಾದವು’ ಎಂದು 25 ವರ್ಷದ ಮನ್​ಜೀತ್​ ಚೌಹಾಣ್​ ಎಂಬ ಉತ್ತರ ಪ್ರದೇಶದ ಲಖಿಂಪುರದ ಕಾರ್ಮಿಕ ಹೇಳಿದ್ದಾನೆ. “ನಮ್ಮ ಹೆತ್ತವರನ್ನು ನಾವಲ್ಲದೆ ಬೇರೆ ಯಾರು ನೋಡಿಕೊಳ್ಳುತ್ತಾರೆ?’ ಎಂಬ ಸೋದರನ ಮಾತುಗಳು, ಸುರಂಗದಲ್ಲಿದ್ದಷ್ಟು ಕಾಲವೂ ತನ್ನ ಕಿವಿಯಲ್ಲಿ ಗುಂಯ್​ಗುಡುತ್ತಿದ್ದವು. ತಂದೆ, ತಾಯಿ ಹಾಗೂ ಇತರ ಕುಟುಂಬ ಸದಸ್ಯರ ಚಿತ್ರ ತನ್ನ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ತಂದೆ-ತಾಯಿಯ ಚಿತ್ರವನ್ನು ಮೊಬೈಲ್​ನ ವಾಲ್​ಪೇಪರ್​ ಮಾಡಿಕೊಂಡಿದ್ದೆ. ಅದನ್ನು ಪ್ರತಿದಿನ ಅನೇಕ ಬಾರಿ ನೋಡುತ್ತಿದ್ದೆ. ಬದುಕುವ ಆಸೆ ಕಮರದಿರಲು ಅದು ನೆರವಾಯಿತು’ ಎಂದು ಚೌಹಾಣ್​ ಭಾವುಕನಾಗಿ ಹೇಳಿದ್ದಾನೆ.

    108 ಗಂಟೆಗಳ ಸತತ ಕಾರ್ಯಾಚರಣೆಯ ಫಲವಾಗಿ ಕಾತರದಿಂದ ಕಾಯುತ್ತಿದ್ದ ಕ್ಷಣ ಕಳೆದ ಮಂಗಳವಾರ ಸಂಜೆ ಮೂರ್ತರೂಪಕ್ಕೆ ಬಂದು ಎಲ್ಲ 41 ಶ್ರಮಜೀವಿಗಳು ಸುರಂಗದಿಂದ ಹೊರಬಂದು ಕುಟುಂಬ ಸದಸ್ಯರು ಮಾತ್ರವಲ್ಲದೆ ಇಡೀ ದೇಶ ನಿಟ್ಟುಸಿರು ಬಿಟ್ಟಿತ್ತು.

    ತಲಾ 1 ಲಕ್ಷ ರೂ. ವಿತರಣೆ

    ಚಿನ್ಯಾಲಿಸೂರ್​ನ ಆಸ್ಪತ್ರೆಗೆ ಧಾವಿಸಿದ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಕಾರ್ಮಿಕರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಲ್ಲದೆ ಪ್ರತಿಯೊಬ್ಬರಿಗೆ ತಲಾ 1 ಲಕ್ಷ ರೂ. ಚೆಕ್​ ವಿತರಿಸಿದರು. ಆಸ್ಪತ್ರೆ ಬಳಿ ಇದ್ದ ಕಾರ್ಮಿಕರ ಕುಟುಂಬ ಸದಸ್ಯರನ್ನು ಧಾಮಿ ಸಂತೈಸಿದರು. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರನ್ನು ರಸಿದ್ದಕ್ಕಾಗಿ ಕುಟುಂಬಸ್ಥರು ಸಿಎಂಗೆ ಧನ್ಯವಾದ ಅರ್ಪಿಸಿದರು.

    ಇಲಿ-ಬಿಲ ತಜ್ಞರಿಗೆ ಬಹುಮಾನ

    ಕಾರ್ಯಾಚರಣೆ ಯಶಸ್ವಿಯಾಗುವಲ್ಲಿ ಕೊನೆ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದ ಇಲಿ&ಬಿಲ ಗಣಿಗಾರಿಕೆ (ರ್ಯಾಟ್​ಹೋಲ್​ ಮೈನಿಂಗ್​) ತಜ್ಞರಿಗೆ ಸಿಎಂ ಧಾಮಿ ತಲಾ 50,000 ರೂ. ಬಹಮಾನ ಘೋಷಿಸಿದರು. ಮುಖ್ಯಮಂತ್ರಿಯಾಗಿ ತಾವು ಹಲವು ಸವಾಲುಗಳನ್ನು ಎದುರಿಸಿದ್ದು ಇದು ಅತ್ಯಂತ ಕಠಿಣವಾಗಿತ್ತು ಎಂದು ಧಾಮಿ ಹೇಳಿದರು.

    2ನೇ ದೀಪಾವಳಿ ಆಚರಿಸಿದ ಗ್ರಾಮ

    ಸುರಂಗದಿಂದ ಪಾರಾಗಿ ಬಂದಿರುವ ತನ್ನ ಊರಿನ ಆರು ಕಾರ್ಮಿಕರ ಬಗ್ಗೆ ಖುಷಿ ವ್ಯಕ್ತಪಡಿಸಲು ಉತ್ತರ ಪ್ರದೇಶದ ಮೋತಿಪುರ ಗ್ರಾಮಸ್ಥರು ಮಂಗಳವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಊರಿನಲ್ಲಿ ಎರಡನೇ ದೀಪಾವಳಿಯ ವಾತಾವರಣ ನೆಲೆಗೊಂಡಿತ್ತು. ಮನೆಮನೆಗಳಲ್ಲಿ ದೀಪಗಳನ್ನು ಬೆಳಗಿ ಸಿಹಿ ಹಂಚಲಾಯಿತು. ರಾಮ್​ ಮಿಲನ್​, ಅಂಕಿತ್​, ಸತ್ಯದೇವ್​, ಸಂತೋಷ್​, ಜಯಪ್ರಕಾಶ್​ ಮತ್ತು ರಾಮ್​ ಸುಂದರ್​ ಮೋತಿಪುರ ಗ್ರಾಮದ ನಿವಾಸಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts