ಕಡೂರು: ವಿದ್ಯುತ್ ಪಡೆದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಮನೆಯ ಸಂಪರ್ಕಕ್ಕೆಂದು ಪಡೆದು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ತಪ್ಪು ಎಂದು ವಿದ್ಯುತ್ ನಿವೃತ್ತ ಲೆಕ್ಕನಿಯಂತ್ರಣಾಧಿಕಾರಿ ಗೋಪಾಲಕೃಷ್ಣ ತಿಳಿಸಿದರು.
ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಬುಧವಾರ ಮೆಸ್ಕಾಂನಿಂದ ಏರ್ಪಡಿಸಿದ್ದ ವಿದ್ಯುತ್ ಗ್ರಾಹಕರ ಜಾಗೃತಿ ಅರಿವು ಕಾರ್ಯಾಗಾರದಲ್ಲಿ ಸುರಕ್ಷತಾ ನಿಯಮಗಳ ಕುರಿತು ಮಾತನಾಡಿ, ವಿದ್ಯುತ್ ಬಳಕೆಯಲ್ಲಿ ಪ್ರಾಣ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಮೆಸ್ಕಾಂ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಳವಿಗೆ ಹೋಗಿ ವಿದ್ಯುತ್ ಸ್ಪರ್ಶಿಸಿ ಸಾವುಗಳು ಸಂಭವಿಸುತ್ತವೆ. ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಸ್ಪರ್ಶದಿಂದ ಅನಾಹುತಗಳು ಸಂಭವಿಸುತ್ತವೆ ಎಂದು ತಿಳಿಸಿದರು.
ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳ ಜತೆ ಚರ್ಚಿಸಬೇಕು. ಬೇಸಿಗೆ ಸಮೀಪದಲ್ಲಿರುವುದರಿಂದ ವಿದ್ಯುತ್ ನಿಯಮಿತ ಬಳಕೆ ಮಾಡಬೇಕು ಎಂದರು.
ಮೆಸ್ಕಾಂ ಉಪವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜು ಮಾತನಾಡಿ, ವಿದ್ಯುತ್ ಸಂಬಂಧಿಸಿದ ದೂರುಗಳು ಇದ್ದರೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಮೆಸ್ಕಾಂ ಎಇಇಗಳಾದ ತಿರುಪತಿನಾಯ್ಕ, ನಂದೀಶ್, ಮೆಸ್ಕಾಂ ಉಪವಿಭಾಗದ ಲೆಕ್ಕಾಧಿಕಾರಿ ಅನುಪಮಾ, ಶ್ರೀಕಣ್ಣನ್, ಪ್ರದೀಪ್, ವಿಭಾಗದ ಮುಖ್ಯ ಗುಮಾಸ್ತ ಟಿ.ಚಂದ್ರಶೇಖರ್, ಕಿರಿಯ ಅಭಿಯಂತರ ಮಂಜೇಗೌಡ ಇತರರಿದ್ದರು.