ನವದೆಹಲಿ: ಪಾಕಿಸ್ತಾನದಲ್ಲಿರುವ ಅಮೆರಿಕದ ಸಾಹಸಿಗ ಮಹಿಳೆ ಸಿಂಥಿಯಾ ಡಿ ರಿಚಿ ಮೇಲೆ ಅಧ್ಯಕ್ಷರ ಭವನದಲ್ಲಿ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಪಿಪಿಪಿ ಅಧಿಕಾರದಲ್ಲಿದ್ದಾಗ ಈ ಘಟನೆ ನಡೆದಿದ್ದು, ಆಗಿನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಸಿಂಥಿಯಾ ಆರೋಪಿಸಿದ್ದಾರೆ. ತಮ್ಮ ಈ ಎಲ್ಲ ಆರೋಪಗಳು ತುಂಬಾ ಗಂಭೀರವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನ ತಮ್ಮ ಖಾತೆಯ ಮೂಲಕ ಶನಿವಾರ ಲೈವ್ ಬಂದ ಸಿಂಥಿಯಾ, ಪಿಪಿಪಿ ಆಡಳಿತದಲ್ಲಿದ್ದಾಗ 2011ರಲ್ಲಿ ಆಗಿನ ಗೃಹ ಸಚಿವ ರೆಹಮಾನ್ ಮಲಿಕ್ ಇಸ್ಲಮಾಬಾದ್ನಲ್ಲಿರುವ ಅಧ್ಯಕ್ಷರ ಭವನದಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದರು. ಇವರಷ್ಟೇ ಅಲ್ಲ, ಪಿಪಿಪಿಯ ಘಟಾನುಘಟಿ ನಾಯಕರು ಕೂಡ ಕಾಮತೃಷೆ ತೀರಿಸಿಕೊಳ್ಳಲು ತಮ್ಮನ್ನು ಬಳಸಿಕೊಂಡಿದ್ದಾಗಿಯೂ ದೂರಿದರು.
ಪಿಪಿಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ಮುಖಂಡರ ಹುಳುಕುಗಳನ್ನು ಬಯಲು ಮಾಡಿದ್ದರಿಂದ, ತಮ್ಮ ವಿರುದ್ಧ ಅವರೆಲ್ಲರೂ ಕಡುಕೋಪ ಪ್ರದರ್ಶಿಸುತ್ತಿದ್ದಾರೆ. ನನ್ನ ಬೆನ್ನುಬಿದ್ದು ಬೇಹುಗಾರಿಕೆ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ಇಮೇಲ್ ಅನ್ನು ಹ್ಯಾಕ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅವಿತಿರುವ ಭೂಗತ ಕ್ರಿಮಿ ದಾವೂದ್ ಇಬ್ರಾಹಿಂ ಕೋವಿಡ್ಗೆ ಬಲಿ?
ಮಲಿಕ್ ತಮ್ಮ ಮೇಲೆ ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಅಧ್ಯಕ್ಷರ ಭವನದಲ್ಲೇ ವಾಸ್ತವ್ಯ ಹೂಡಿದ್ದ ಅಂದಿನ ಆರೋಗ್ಯ ಸಚಿವ ಮಕ್ದೂಮ್ ಶಹಾಬುದ್ದೀನ್ ಮತ್ತು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿಯೂ ವಿವರಿಸಿದರು.
ಸಾಕ್ಷ್ಯಗಳಿವೆ: ತಮ್ಮ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ನಡೆದ ಬಗ್ಗೆ ಎಲ್ಲ ಸಾಕ್ಷ್ಯಾಧಾರಗಳು ತಮ್ಮ ಬಳಿ ಇರುವುದಾಗಿ ಸಿಂಥಿಯಾ ಹೇಳಿಕೊಂಡಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಬರುವ ಮುನ್ನ ಸಿಂಥಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಝರ್ದಾರಿ ಅವರ ಕೊಳಕು ಪಿಪಿಪಿ ನನ್ನನ್ನು ಬೆದರಿಸುತ್ತಿದೆ. ಏಕೆ? ಏಕೆಂದರೆ ಹಲವು ವರ್ಷಗಳಿಂದ ಪಿಪಿಪಿಯ ಉನ್ನತ ಸ್ಥಾನದಲ್ಲಿರುವ ನಾಯಕರು ಅನೇಕರು ನನ್ನ ಮೇಲೆ ಅತ್ಯಾಚಾರ ಎಸಗಿರುವುದು, ಲೈಂಗಿಕವಾಗಿ ಬಳಸಿಕೊಂಡಿರುವ ಮತ್ತು ಹಲ್ಲೆ ಮಾಡಿರುವ ಸಂಗತಿ ಆ ಪಕ್ಷದವರಿಗೆ ತಿಳಿದಿದೆ. ಇನ್ನು 30 ನಿಮಿಷದಲ್ಲಿ ನಾನು ಫೇಸ್ಬುಕ್ ಲೈವ್ನಲ್ಲಿ ಬಂದು ಈ ಎಲ್ಲ ಸಂಗತಿಗಳನ್ನು ಬಹಿರಂಗಪಡಿಸಲಿದ್ದೇನೆ ಎಂದು ಬರೆದುಕೊಂಡಿದ್ದರು.
ತಮ್ಮನ್ನು ತಾವು ಸಾಹಸಿಗ ಮಹಿಳೆ, ಚಲನಚಿತ್ರ ನಿರ್ಮಾಪಕಿ, ಪತ್ರಕರ್ತೆ ಮತ್ತು ಬ್ಲಾಗರ್ ಎಂದೆಲ್ಲ ಪರಿಚಯಿಸಿಕೊಳ್ಳುವ ಸಿಂಥಿಯಾ ಈ ಹಿಂದೆ ಪಾಕ್ನ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ವಿರುದ್ಧ ಅವಹೇಳನಕಾರಿಯಾಗಿ ಟ್ವಿಟರ್ನಲ್ಲಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಪಿಪಿ ಅವರ ವಿರುದ್ಧ ದ್ವೇಷಪೂರ್ಣ ಹೇಳಿಕೆ ನೀಡಿರುವ ಬಗ್ಗೆ ದೂರು ದಾಖಲಿಸಿತ್ತು.
ಇದಲ್ಲದೆ, ಕೆಲದಿನಗಳಿಂದ ಪಿಪಿಪಿ ಮುಖಂಡರ ಹಲವು ಹಗರಣಗಳ ಕುರಿತ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬಹಿರಂಗೊಳಿಸುತ್ತಲೇ ಇದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರೀಗ ಫುಲ್ ಖುಷ್! ಕಾರಣ ಇಲ್ಲಿದೆ ನೋಡಿ…