ಲಖನೌ: ಸಂಚಾರ ದಟ್ಟಣೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಫಿರೋಜಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಹೋದ ವ್ಯಕ್ತಿಗೆ ಅಚ್ಚರಿಯ ಉಡುಗೊರೆ ಕಾದಿತ್ತು. ಅಂಥದ್ದೊಂದು ಸನ್ನಿವೇಶವನ್ನು ಆ ದೂರು ನೀಡಲು ಹೋದ ವ್ಯಕ್ತಿ ಊಹಿಸಿಯೇ ಇರಲಿಲ್ಲ. ವ್ಯವಸ್ಥೆ ಬಗ್ಗೆ ದೂರುವವರಿಗೆ ಒಂದು ಪಾಠ ಈ ಸನ್ನಿವೇಶ.
ಫಿರೋಜಾಬಾದಿನ ಸುಭಾಷ್ ಇಂಟರ್ ಸೆಕ್ಷನ್ ಬಳಿ ಮಂಗಳವಾರ ಭಾರಿ ಸಂಚಾರ ದಟ್ಟಣೆ ಇತ್ತು. ಆ ವ್ಯಕ್ತಿಯೂ ಅದರಲ್ಲಿ ಸಿಲುಕಿದ್ದ. ಅದರಿಂದ ಬೇಸತ್ತ ಆತ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ಬಳಿ ಹೋಗಿ ದೂರು ನೀಡಿದ. ಅಲ್ಲಿ ದೂರುದಾರನಿಗೆ ಅಚ್ಚರಿ ಕಾದಿತ್ತು! ಕೂಡಲೇ ಸರ್ಕಲ್ ಆಫೀಸರ್ ಸ್ತರದ ಟ್ರಾಫಿಕ್ ವೊಲಂಟಿಯರ್ ಎಂಬ ಪದವಿ ನೀಡಿ ಎರಡು ಗಂಟೆ ಸಂಚಾರ ದಟ್ಟಣೆ ನೀಡುವಂತೆ ಪಟೇಲ್ ದೂರುದಾರನಿಗೆ ಸೂಚಿಸಿದರು.
ಅನಿರೀಕ್ಷಿತ ಆಫರ್ನಿಂದ ದಿಗ್ಭ್ರಾಂತನಾದ ದೂರುದಾರನ ಹೆಸರು ಸೋನು ಚೌಹಾಣ್. ಪೊಲೀಸರು ಆತನಿಗೆ ಸಮವಸ್ತ್ರವನ್ನೂ ಕೊಟ್ಟರು. ಇತರೆ ಟ್ರಾಫಿಕ್ ಪೊಲೀಸರೊಡನೆ ಸೋನುವನ್ನೂ ಜೀಪು ಹತ್ತಿಸಿದರು. ಅದೇ ಇಂಟರ್ಸೆಕ್ಷನ್ ಬಳಿಕ ಸಂಚಾರ ದಟ್ಟಣೆಯನ್ನು ನಿರ್ವಹಿಸಿದ. ತಪ್ಪು ಸ್ಥಳದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಎಂಟು ಪ್ರಕರಣಗಳನ್ನು ದಾಖಲಿಸಿ 1,600 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ ಎಂದು ಸೋನು ಜತೆಗಿದ್ದ ಟ್ರಾಫಿಕ್ ಇನ್ಸ್ಪೆಕ್ಟರ್ ರಾಮದತ್ತ ಶರ್ಮಾ ಹೇಳಿದ್ದಾರೆ.
ಎರಡು ಗಂಟೆ ಸಂಚಾರ ದಟ್ಟಣೆ ನಿರ್ವಹಿಸಿದ ಬಳಿಕ ಸೋನು ಹೇಳಿದ್ದು ಇಷ್ಟು- ಟ್ರಾಫಿಕ ಪೊಲೀಸರು ಎದುರಿಸುವ ಸಮಸ್ಯೆಗಳನ್ನು ಅರಿಯುವುದಕ್ಕೆ ನನಗೆ ಈ ಪ್ರಯೋಗ ನೆರವಾಯಿತು. ಸಾರ್ವಜನಿಕರಾಗಿದ್ದುಕೊಂಡು ನಾವು ಸಂಚರಿಸುವಾಗ ನಿಯಮ ಉಲ್ಲಂಘಿಸಿದರೆ ಉಂಟಾಗುವ ತೊಂದರೆ, ಸಮಸ್ಯೆಗಳ ಅರಿವೂ ಆಯಿತು. ಒಂದು ವಾಹನ ನಿಯಮ ಉಲ್ಲಂಘಿಸಿದರೆ ಇಡೀ ಸಂಚಾರ ವ್ಯವಸ್ಥೆ ಹಾಳಾಗುತ್ತದೆ. ನಾನು ಇನ್ನು ಹೆಚ್ಚಿನ ಹೊಣೆಗಾರಿಕೆಯುಳ್ಳ ಪೌರನಾಗಿರುತ್ತೇನೆ.