ಉತ್ತರಪ್ರದೇಶ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ. ಈ ವಿಷಯವನ್ನು ಸಚಿವ ಹಾಗೂ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಡಾ. ನಾರಾಯಣಗೌಡ ಅವರು ತಿಳಿಸಿದ್ದಾರೆ.
ಇಂದು ಲಖನೌದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದು ಭೇಟಿ ಮಾಡಿದ ಅವರು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಿದರು.
ಲಕ್ಷ್ಮಣತೀರ್ಥ-ಹೇಮಾವತಿ-ಕಾವೇರಿ ನದಿ ಕೂಡುವ ಈ ತ್ರಿವೇಣಿ ಸಂಗಮದಲ್ಲಿ ಅ.13 ರಿಂದ 16 ರ ವರೆಗೂ ಮಹಾಕುಂಭಮೇಳ ನಡೆಯಲಿದೆ. ಆದರೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಅ.16ರಂದು ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಸುದೀರ್ಘ ಮಾತುಕತೆ-ವಿಶೇಷ ಆತಿಥ್ಯ
ನಿಯೋಗವನ್ನು ಕರೆದೊಯ್ದ ತಮ್ಮ ಜತೆ ಯೋಗಿ ಆದಿತ್ಯನಾಥ ಅವರು ಸುಮಾರು ಮುಕ್ಕಾಲು ಗಂಟೆ ಕಾಲ ಮಾತುಕತೆ ನಡೆಸಿದ್ದಲ್ಲದೆ, ವಿಶೇಷವಾಗಿ ಆತಿಥ್ಯ ನೀಡಿ ಸತ್ಕರಿಸಿದರು ಎಂಬುದಾಗಿ ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಉತ್ತರಪ್ರದೇಶದ ಗೋರಖನಾಥೇಶ್ವರನ ಸಂಬಂಧದ ಬಗ್ಗೆ ಯೋಗಿಜೀ ಮೆಲುಕು ಹಾಕಿದರು. ಪರಶುರಾಮನ ಕಥೆ, ಕಾಲಬೈರವೇಶ್ವರನ ಕಥೆ, ಧರ್ಮಸ್ಥಳ ಮತ್ತು ಆದಿಚುಂಚನಗಿರಿಯ ಇತಿಹಾಸ ಹಾಗೂ ನಾಥ ಪರಂಪರೆ ಮತ್ತು ಕರ್ನಾಟಕ ಸರ್ಕಾರ ಪ್ರಸ್ತುತ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು.
ಕುವೆಂಪು ಅವರ ರಾಮಾಯಣ ದರ್ಶನಂ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್.ಭೈರಪ್ಪನವರ ಪರ್ವ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ನೀಡಿದ್ದಾಗಿ ಸಚಿವರು ತಿಳಿಸಿದ್ದಾರೆ. ಕೆಪಿಎಸ್ಸಿ ಸದಸ್ಯ ಪ್ರಭುದೇವ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಗಟ್ಟಿಗಿತ್ತಿ ಅಜ್ಜಿ ಕೈಗೆ ಸಿಕ್ಕಿಬಿದ್ದ ಸರಗಳ್ಳಿ; ರಾಜಮ್ಮನ ಎದೆಗಾರಿಕೆ-ಸಮಯಪ್ರಜ್ಞೆಗೆ ಪೊಲೀಸರ ಸೆಲ್ಯೂಟ್
ದಸರಾಗೆ ಪ್ರಧಾನಿ ಮೋದಿ ಆಗಮಿಸುತ್ತಾರಾ?; ಇಲ್ಲಿದೆ ಸಿಎಂ ನೀಡಿರುವ ಮಾಹಿತಿ..