ಬಳ್ಳಾರಿ: ಕರೊನಾ ಸೋಂಕು ಹರಡದಂತೆ ಜಿಂದಾಲ್ ಕಾರ್ಖಾನೆಗೆ ವಿಧಿಸಿದ್ದ ನಿರ್ಬಂಧಗಳನ್ನು ಆ.15ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಜಿಂದಾಲ್ ಮೂಲದಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಜೂ.16ರಂದು ಜಿಲ್ಲಾಧಿಕಾರಿ ಜಿಂದಾಲ್ ಕಾರ್ಖಾನೆಯ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಜಿಂದಾಲ್ ಟೌನ್ಶಿಪ್ಗಳಲ್ಲಿ ಇರಬೇಕು. ಟೌನ್ಶಿಪ್ಗಳಿಂದಲೇ ಕೆಲಸಕ್ಕೆ ಹೋಗಿಬರಬೇಕು. ಟೌನ್ಶಿಪ್ ಹಾಗೂ ಕೆಲಸದ ಸ್ಥಳ ಹೊರತುಪಡಿಸಿ ಬೇರೆ ಎಲ್ಲಿಯೂ ಹೋಗುವಂತಿಲ್ಲ. ಟೌನ್ಶಿಪ್ ಹಾಗೂ ಕಾರ್ಖಾನೆಗೆ ಹೋಗಿಬರಲು ಸರಕು ಸಾಗಣೆ ವಾಹನಗಳಿಗೆ ಅವಕಾಶ ನೀಡಲಾಗುವುದು. ಯಾವುದೇ ಚಟುವಟಿಕೆ ಕೈಗೊಳ್ಳಬೇಕಾದರೂ ಸಹಾಯಕ ಆಯುಕ್ತರ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಕುಲ್ ಸೂಚಿಸಿದ್ದಾರೆ.