ವಿಜಯಪುರ: ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಬಂಗಾರದ ಪದಕಗಳ ಬೇಟೆಯಾಡುವ ಮೂಲಕ ಅನ್ನದಾತನೋರ್ವನ ಪುತ್ರ ಬರದ ನಾಡಿನ ಹಿರಿಮೆ ಹೆಚ್ಚಿಸಿದ್ದಾನೆ.
ಜಿಲ್ಲೆಯ ಖ್ಯಾತ ಉದ್ಯಮಿ, ರೈತ ಹಾಗೂ ರಾಜಕಾರಣಿಯೂ ಆಗಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಅವರ ಪುತ್ರ ಸಾಗರ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿಯಾಗಿ ಅನುಪಮ ಸಾಧನೆ ಮೆರೆದಿದ್ದಾರೆ.
2021-22ನೇ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (ಆನರ್ಸ್) ಕೃಷಿ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ್ದಾರೆ. ತನ್ನಿಮಿತ್ತ ಫೆ. 29 ರಂದು ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ಪದವಿ ಪ್ರಮಾಣ ಪತ್ರದ ಘೋಷಣೆ ಮೊಳಗಿತಾದರೂ ಅನಿವಾರ್ಯ ಕಾರಣಗಳಿಂದಾಗಿ ಸಾಗರ ಹಾಜರಾಗಿರಲಿಲ್ಲ.
ಹೀಗಾಗಿ ಸೋಮವಾರ ಸಾಧಕ ವಿದ್ಯಾರ್ಥಿ ಸಾಗರನನ್ನು ವಿವಿಗೆ ಕರೆಯಿಸಿ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕುಲಸಚಿವ ಡಾ.ಎಂ. ವೀರನಗೌಡರ ಅವರು ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು. ವಿವಿಯ ಕುಲಪತಿ ಎಂ. ಹನುಮಂತಪ್ಪ ಸಾಗರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರ ಸಂಸ್ಕರಣಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉದಯಕುಮಾರ ನಿಡೋಣಿ, ಸಾಗರನ ತಂದೆ ಉಮೇಶ ಕೋಳಕೂರ ಹಾಗೂ ಸಂಗಮೇಶ ಪಾಟೀಲ ಮತ್ತಿತರರಿದ್ದರು.