ಜೈಪುರ: ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ರಾಜಸ್ಥಾನ ಪೊಲಿಸ್ ಪಡೆಯ ವಿಶೇಷ ಕಾರ್ಯಾಚರಣೆ ಪಡೆ (ಎಸ್ಒಜಿ) ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ವಿಚಾರಣೆಗೆ ಹಾಜರಾಗಿ, ಹೇಳಿಕೆ ದಾಖಲಿಸುವಂತೆ ನೋಟಿಸ್ ನೀಡಿದೆ.
ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮೂಲಕ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ನೋಟಿಸ್ ತಲುಪಿಸಲಾಗಿದೆ ಎಂದು ಎಸ್ಒಜಿಯ ಹೆಚ್ಚುವರಿ ಮಹಾಪ್ರಧಾನ ನಿರ್ದೇಶಕ ಅಶೋಕ್ ರಾಥೋಡ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ
ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿ ದೂರವಾಣಿಯಲ್ಲಿ ಮಾತುಕತೆ ಮಾಡಲಾಗಿದೆ ಎಂದು ಹೇಳಲಾದ ಮೂರು ಧ್ವನಿತುಣುಕುಗಳು (ಆಡಿಯೋ ಕ್ಲಿಪ್) ಸಿಕ್ಕಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ವೈರಲ್ ಆಗಿವೆ. ಅವುಗಳ ಪೈಕಿ ಒಂದು ಧ್ವನಿತುಣುಕಿನಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕಾಂಗ್ರೆಸ್ನ ಬಂಡಾಯ ಶಾಸಕರ ನಡುವೆ ನಡೆದಿದೆ ಎನ್ನಲಾದ ಮಾತುಕತೆ ದಾಖಲಾಗಿದೆ. ಆದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ನ ಮುಖ್ಯಸಚೇತಕ ಮಹೇಶ್ ಜೋಡಿ ನೀಡಿದ್ದ ದೂರನ್ನು ಆಧರಿಸಿ ಎಸ್ಒಜಿ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿಕೊಂಡಿತ್ತು.
ಆ ಧ್ವನಿತುಣುಕುಗಳಲ್ಲಿ ಇರುವ ಕಾಂಗ್ರೆಸ್ನ ಬಂಡಾಯ ಶಾಸಕರ ಧ್ವನಿಯನ್ನು ಭನ್ವರ್ಲಾಲ್ ಶರ್ಮ ಹಾಗೂ ಮಧ್ಯವರ್ತಿ ಸಂಜಯ್ ಜೈನ್ ಅವರದ್ದು ಎಂದು ಗುರುತಿಸಿ ಎಫ್ಐಆರ್ನಲ್ಲಿ ಹೆಸರಿಸಲಾಗಿತ್ತು. ಇದರ ಬೆನ್ನಲ್ಲೇ ಸಂಜಯ್ ಜೈನ್ ಅವರನ್ನು ಬಂಧಿಸಿದ್ದ ಎಸ್ಒಜಿ, ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಆದರೆ ಕಾಂಗ್ರೆಸ್ನ ಈ ಎಲ್ಲ ಆರೋಪಗಳನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಬಂಡಾಯ ಶಾಸಕ ಎನ್ನಲಾದ ಭನ್ವರ್ಲಾಲ್ ಶರ್ಮ ತಿರಸ್ಕರಿಸಿದ್ದರು.