ಉಜ್ಜಿನಿ: ಕೂಡ್ಲಿಗಿ ವಿಧಾನಸಭಾ ವ್ಯಾಪ್ತಿಯ ರಾಮಸಾಗರಹಟ್ಟಿ, ಸೂಲದಹಳ್ಳಿ, ಚಿಕ್ಕಜೋಗಿಹಳ್ಳಿ, ಹಿರೇಕುಂಬಳಗುಂಟೆ ಮತ್ತು ನಿಂಬಳಗೆರೆ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜಿಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.
2022-23ನೇ ಸಾಲಿನಲ್ಲಿ ಪ್ರಥಮ ವರ್ಷದ ತರಗತಿ ಆರಂಭಿಸಲು ಸೂಚನೆ ನೀಡಲಾಗಿದೆ. ನಿಂಬಳಗೆರೆ ಪ್ರೌಢಶಾಲೆಯಲ್ಲಿ ಸದ್ಯ 458 ವಿದ್ಯಾರ್ಥಿಗಳಿದ್ದು, ನಿಂಬಳಗೆರೆ, ಗಾಟಗಟ್ಟೆ, ಯರ್ರಮನಹಳ್ಳಿ, ಮಂಗಾಪುರ ಮತ್ತಿತರ ಗ್ರಾಮಗಳ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಪಿಯುಸಿಗಾಗಿ ಉಜ್ಜನಿ, ಕೊಟ್ಟೂರುಗಳಿಗೆ ಹೋಗುವ ಕೆಲ ವಿದ್ಯಾರ್ಥಿಗಳಿಗೂ ಈ ಆದೇಶದಿಂದ ಸಂತಸವಾಗಿದೆ. ಶಾಸಕ ಎನ್.ವೈ.ಗೋಪಾಲಕೃಷ್ಣ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಫಲ ಈಗ ಸಿಕ್ಕಿದೆ.
ರಾಮಸಾಗರಹಟ್ಟಿ, ಸೂಲದಹಳ್ಳಿ, ಚಿಕ್ಕಜೋಗಿಹಳ್ಳಿ ಶೈಕ್ಷಣಿಕವಾಗಿ ಅತಿ ಹಿಂದುಳಿದ ಪ್ರದೇಶಗಳಾಗಿವೆ. ಇವುಗಳೊಂದಿಗೆ ಹಿರೇಕುಂಬಳಗುಂಟೆ, ನಿಂಬಳಗೆರೆಯಲ್ಲಿಯೂ ಪದವಿ ಪೂರ್ವ ಕಾಲೇಜನ್ನು ಆರಂಭ ಮಾಡಲು ಮಂಜೂರಾತಿ ತರಲಾಗಿದೆ. ಈ ಕಾಲೇಜುಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನೀಡಲಾಗುವುದು.
| ಎನ್.ವೈ.ಗೋಪಾಲಕೃಷ್ಣ, ಕೂಡ್ಲಿಗಿ ಶಾಸಕ