ವಿಜಯಪುರ: ಶ್ರೇಷ್ಠ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ನಿಲುವಿನ ಬಗ್ಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸನಾತನ ಧರ್ಮದ ಶ್ರೇಷ್ಟತೆ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಒಬ್ಬ ಕ್ರಿಮಿ ರೀತಿಯಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಸಾವಿರಾರು ವರುಷಗಳ ಭವ್ಯ ಸನಾತನ ಧರ್ಮ ಕೇವಲ ಧರ್ಮವಲ್ಲ ಅದೊಂದು ಸಂಸ್ಕಾರ, ಭಕ್ತಿ, ಆಧ್ಯಾತ್ಮ, ವಿಜ್ಞಾನದ ಅನೇಕ ತತ್ವ, ವೇದ, ಆಗಮನ, ಉಪನಿಷತ್ ಮೊದಲಾದವುಗಳಿಂದ ನಿರ್ಮಾಣವಾಗಿದೆ. ಇಂತ ಉದಾತ್ತ ಸನಾತನ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡಿರುವುದು ಸರಿಯಲ್ಲ. ಸನಾತನ ಧರ್ಮ ಡೆಂಗೆ, ಮಲೇರಿಯಾ ರೋಗ ಇದ್ದಂತೆ ಎಂದಿರುವ ಉದಯನಿಧಿ ಮಾನಸಿಕ ಅಸ್ವಸ್ಥತರಂತೆ ಮಾತನಾಡಿದ್ದಾರೆ.
ಋಷಿ ಮುನಿಗಳ ತಪೋಬಲ ರೂಪಿಯಾಗಿರುವ ಸನಾತನ ಧರ್ಮ ಎಂದೂ ಅಳಿಯದು, ಸನಾತನ ಧರ್ಮ ಸಾಮಾಜಿಕ ನ್ಯಾಯ, ವ್ಯಕ್ತಿ ಶ್ರೇಷ್ಠತೆಗೆ ಆದ್ಯತೆ ನೀಡಿದೆ ಎಂಬುದನ್ನು ಉದಯನಿಧಿ ಅರ್ಥ ಮಾಡಿಕೊಳ್ಳಬೇಕು. ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳು ಪ್ರತಿಯೊಬ್ಬರಲ್ಲಿ ನೋವು ಮೂಡಿಸಿದೆ, ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.