ಅರಸೀಕೆರೆ: ಕರೊನಾ ಎರಡನೇ ಅಲೆ ಕಾರಣ ಉಚ್ಚಂಗಿದುರ್ಗದಲ್ಲಿ ಏ.12 ರಿಂದ 15ರವರೆಗೆ ನಡೆಯಬೇಕಿದ್ದ ಯುಗಾದಿ ಜಾತ್ರೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಪ್ರತಿ ವರ್ಷ ಯುಗಾದಿಗೆ ಹಾಲಮ್ಮನ ತೋಪಿನಲ್ಲಿ ಜಾತ್ರೆ ನಡೆಯುತ್ತಿತ್ತು. ಆದರೆ, ಕರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಹಾಲಮ್ಮ, ಪಾದಗಟ್ಟೆ, ಉಚ್ಚೆಂಗೆಮ್ಮ ದೇವಿಯ ದರ್ಶನಕ್ಕೂ ಭಕ್ತರಿಗೆ ಅವಕಾಶ ನೀಡಿಲ್ಲ. ಜಾತ್ರೆಯಲ್ಲಿ ಭಕ್ತರು ಗುಂಪು ಸೇರುವಿಕೆ ತಪ್ಪಿಸಲು ಅಣಜಿ ರಸ್ತೆ, ಹರಪನಹಳ್ಳಿ ರಸ್ತೆ, ಬೇವಿನಹಳ್ಳಿ ರಸ್ತೆ, ಹಾಲಮ್ಮನ ತೋಪಿನ ರಸ್ತೆ, ಅಣಜಿಗೆರೆ, ರಾಮಘಟ್ಟ ರಸ್ತೆ ಹಾಗೂ ಗುಡ್ಡಕ್ಕೆ ಪ್ರವೇಶಿಸುವ ಹಳ್ಳಿನ ಗದ್ದೆ, ಪಾದಗಟ್ಟೆಯಿಂದ ಗುಡ್ಡಕ್ಕೆ ಪ್ರವೇಶ ನೀಡುವ ಎಲ್ಲ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಹರಪನಹಳ್ಳಿ ಸಿಪಿಐ ಕಮ್ಮಾರ್ ನಾಗರಾಜ್ ತಿಳಿಸಿದರು. ಪಿಎಸ್ಐ ಕಿರಣ್ ಕುಮಾರ್, ಸಿಬ್ಬಂದಿ ನಟರಾಜ್, ಮಂಜುನಾಥ್, ಜಗದೀಶ್ ಇತರರಿದ್ದರು.