ಮುರ್ಷಿದಾಬಾದ್: ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳಿಂದ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ದಾಳಿ ನಡೆಸಿರುವುದು ಟಿಎಂಸಿ ಪಕ್ಷದ ಕಾರ್ಯಕರ್ತರೇ ಎನ್ನುವ ದೂರುಗಳು ಕೇಳಿ ಬರುತ್ತಿದೆ.
ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಇಂದು ಆಲ್ ಇಂಡಿಯಾ ಬಂದ್ ಮಾಡಲಾಗಿದ್ದು, ಇದರ ಒಂದು ಭಾಗವಾಗಿ ಸಾಹೇಬ್ನಗರ ಮಾರ್ಕೆಟ್ನ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಸಾಗುತ್ತಿದ್ದ ಪ್ರತಿಭಟನೆಯಲ್ಲಿ ಕೆಲ ಕಿಡಿಗೇಳಿಗಳು ನುಗ್ಗಿದ್ದು, ಬಂದೂಕಿನಿಂದ ಗುಂಡು ಹಾರಿಸಿ, ಬಾಂಬ್ಗಳನ್ನು ತೂರಿದ್ದಾರೆ. ದಾಳಿಯಿಂದಾಗಿ ಅನರುಲ್ ಬಿಸ್ವಾಸ್ (55) ಸ್ಥಳದಲ್ಲೇ ಮೃತ ಪಟ್ಟಿದ್ದು, ಸಲಾವುದ್ದೀನ್ ಶೇಖ್ (17) ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಅಸುನೀಗಿದ್ದಾರೆ. ಉಳಿದಂತೆ ಇನ್ನು ಮೂವರು ಪ್ರತಿಭಟನಾಕಾರರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಂತಿಯುತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿರುವುದು ಆಡಳಿತ ಪ ಕ್ಷವಾಗಿರುವ ಟಿಎಂಸಿ ಪಕ್ಷದ ಕಾರ್ಯಕರ್ತರೇ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
“ಇಂದು ಮುಂಜಾನೆ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಟಿಎಂಸಿ ಜಲಾಂಗಿ ಬ್ಲಾಕ್ನ ಅಧ್ಯಕ್ಷರಾಗಿರುವ ತೊಹಿರುದ್ದೀನ್ ಮೊಂಡಲ್ ತನ್ನ ಸಂಗಡಿಗರೊಡನೆ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು ಐದು ಕಾರುಗಳಲ್ಲಿ ಅವರು ಬಂದಿದ್ದರು” ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಮ್ಡಾದುಲ್ ಹ್ಯಾಕ್ ದೂರಿದ್ದಾರೆ.
ಮಮತಾ ಬ್ಯಾನರ್ಜಿ ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸುತ್ತಾರೆ. ಆದರೆ ಅವರದ್ದೇ ಪಕ್ಷದ ಕಾರ್ಯಕರ್ತರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುತ್ತಾರೆ. ಇದರ ಅರ್ಥ ಟಿಎಂಸಿ ಪಕ್ಷದ ಕಾರ್ಯಕತರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದಾಗುತ್ತದೆ ಎಂದು ಮುರ್ಷಿದಾಬಾದ್ನ ಕಾಂಗ್ರೆಸ್ ವಕ್ತಾರ ಜಯಂತ್ ದಾಸ್ ದೂರಿದ್ದಾರೆ. ಸಿಎಎ ಜಾರಿಗೆ ಬಂದಾಗಿನಿಂದಲೂ ಸಿಪಿಐಎಂನ ಜತೆಗೂಡಿ ಕಾಂಗ್ರೆಸ್ ಸಿಎಎಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು ಈ ದಾಳಿಯ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಎರಡೂ ಪಕ್ಷಗಳು ಆರೋಪ ಮಾಡಿವೆ.
ಆದರೆ ಟಿಎಂಸಿ ಪಕ್ಷ ತನ್ನ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದೆ. ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಹೋರಾಟಗಳಿಗೆ ಅಡ್ಡಿಪಡಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿಲ್ಲ ಎಂದು ಮುರ್ಷಿದಾಬಾದ್ನ ಟಿಎಂಸಿ ಅಧ್ಯಕ್ಷ ಮತ್ತು ಸಂಸದ ಅಬು ತಹೇರ್ ಖಾನ್ ತಿಳಿಸಿದ್ದಾರೆ. ಯಾರೇ ಈ ದುಷ್ಕೃತ್ಯವನ್ನು ಮಾಡಿದ್ದರೂ ಅವರನ್ನು ಪೊಲೀಸರು ತಕ್ಷಣವೇ ಬಂಧಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್)