ನವದೆಹಲಿ: ತಮ್ಮ ಪಾಲಕರೊಂದಿಗೆ ದನ ಮೇಯಿಸಲು ಹೋಗಿದ್ದಾಗ ಮಕ್ಕಳು ಎರಡು ಮರಿಗಳು ಆಟವಾಡುತ್ತಿರುವುದನ್ನು ಗಮನಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ನಂತರ ಆ ಮರಿಗಳನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿದ್ದಾರೆ. ಅಷ್ಟಕ್ಕೂ ಅಧಿಕಾರಿಗಳು ಆ ಮರಿಗಳನ್ನು ಸಂರಕ್ಷಿಸಿದ್ದೇಕೆ?, ಈ ಘಟನೆ ನಡೆದದ್ದು ಎಲ್ಲಿ? ಮುಂದೆ ಓದಿ…
ಅಧಿಕಾರಿಗಳ ಪ್ರಕಾರ, ಗುರುಗ್ರಾಮದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿರುವ ನುಹ್ಸ್ ಕೋಟ್ಲಾ ಗ್ರಾಮದಲ್ಲಿ ಗುರುವಾರ ರಾತ್ರಿ ಮಕ್ಕಳು ಆ ಮರಿಗಳೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ. ಅವರು ಅದನ್ನು ಬೆಕ್ಕಿನ ಮರಿ ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಅವು ಬೆಕ್ಕಿನ ಮರಿಗಳಲ್ಲ ಚಿರತೆ ಮರಿಗಳು. ಹಾಗಾಗಿ ಅರಣ್ಯಾಧಿಕಾರಿಗಳು ಶುಕ್ರವಾರ ಬೆಳಗ್ಗೆ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಹಿಟ್ಲರ್ಗೆ ಬೈದರೆ ನಿಮಗೇಕೆ ಸಿಟ್ಟು: ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ
ವನ್ಯಜೀವಿ ನಿರೀಕ್ಷಕ ರಾಜೇಶ್ ಚಾಹಲ್ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮಾಹಿತಿ ಪಡೆದು, ಶುಕ್ರವಾರ ಬೆಳಗ್ಗೆ ಕೋಟ್ಲಾ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆಗ ಮರಿಗಳಿಗೆ ನಾಲ್ಕು ದಿನ ವಯಸ್ಸಾಗಿತ್ತು ಎಂದು ಚಹಾಲ್ ತಿಳಿಸಿದ್ದಾರೆ.
“ನಾವು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮರಿಗಳನ್ನು ಅವರ ತಾಯಿಯೊಂದಿಗೆ ಮತ್ತೆ ಸೇರಿಸಲು ಯೋಜಿಸುತ್ತಿದ್ದೇವೆ. ಆದಷ್ಟು ಬೇಗ ಮರಿಗಳನ್ನು ತಾಯಿಯೊಂದಿಗೆ ಮತ್ತೆ ಸೇರಿಸುತ್ತೇವೆ” ಎಂದು ಅರಣ್ಯ (ವನ್ಯಜೀವಿ) ಮುಖ್ಯ ಸಂರಕ್ಷಣಾಧಿಕಾರಿ ಎಂಎಸ್ ಮಲಿಕ್ ಹೇಳಿದ್ದಾರೆ.
“ಎರಡೂ ಮರಿಗಳನ್ನು ನಿಗಾದಲ್ಲಿ ಇರಿಸಲಾಗಿದ್ದು, ಅವು ಪತ್ತೆಯಾದ ಅರಾವಳಿಗೆ ಕರೆದೊಯ್ಯಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಚಿರತೆಗಳ ಪಟ್ಟಿ ಹೆಚ್ಚುತ್ತಿರುವುದನ್ನೂ ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ನುಹ್ನ ಖೇರ್ಲಾ ಗ್ರಾಮದ ನಿವಾಸಿಗಳು ವಸತಿ ಪ್ರದೇಶದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಅರಾವಳಿಯಲ್ಲಿ ಜೋಡಿ ಚಿರತೆಗಳನ್ನು ಗುರುತಿಸಿದ್ದರು.