ಬೆಂಗಳೂರು: ಟೀ ಕುಡಿಯಲು ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಅಂಬುಲೆನ್ಸ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೈಸೂರಿನ ಪ್ರಕಾಶ್ ಹಾಗೂ ಬನಶಂಕರಿ ಮೂಲದ ನಾಗೇಂದ್ರ ಮೃತ ದುದೈರ್ವಿಗಳು.
ಅಪಘಾತವೆಸಗಿದ ಆಂಬುಲೆನ್ಸ್ ಚಾಲಕ ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದು, ವಾಹನದಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿಕ್ಕಜಾಲ ಬಳಿಯ ತರಬನಹಳ್ಳಿ ಬಳಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಐಫೋನ್ ಬಳಕೆದಾರರೇ ಎಚ್ಚರ; ನಿಮ್ಮ ಬೆಲೆಬಾಳುವ ಫೋನ್ಗಳೇ ಇವರ ಟಾರ್ಗೆಟ್
ಮೃತರಾದ ಪ್ರಕಾಶ್, ನಾಗೇಂದ್ರ ಸೇರಿದಂತೆ 15ಕ್ಕಿಂತ ಹೆಚ್ಚು ಮಂದಿ ಲೆವಿಸ್ಟಾ ಕಾಫಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಗೆ ಸಂಬಂಧಿಸಿದಂತೆ ಹೊಟೇಲ್ವೊಂದರಲ್ಲಿ ಹಮ್ಮಿಕೊಂಡಿದ್ದ ತರಬೇತಿಗಾಗಿ ಬಂದಿದ್ದರು. ಟೀ ಕುಡಿಯಲು ಇಂದು ಬೆಳಗ್ಗೆ ಇಬ್ಬರು ನಡೆದುಕೊಂಡು ಹೋಗುವಾಗ ವೇಗವಾಗಿ ಬಂದ ಅಂಬುಲೆನ್ಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪ್ರಕಾಶ್ ಸ್ಥಳದಲ್ಲಿ ಮೃತಪಟ್ಟಿರೆ, ಗಾಯಗೊಂಡಿದ್ದ ನಾಗೇಂದ್ರ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಂಬುಲೆನ್ಸ್ನಲ್ಲಿ ರೋಗಿ ಇಲ್ಲದಿದ್ದರೂ ವೇಗವಾಗಿ ಚಾಲನೆ ಮಾಡಿ ಇಬ್ಬರ ಚಾಲಕ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ. ಅಪಘಾತ ಬಳಿಕ ಚಾಲಕ ದೇವನಹಳ್ಳಿ ಮೂಲದ ಪ್ರಸನ್ನ ಪರಾರಿಯಾಗಿದ್ದು ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಗರಹಾವಿನ ವಿಷ ಹೀರಿ ತಾಯಿ ಜೀವ ಉಳಿಸಿದ ಪುತ್ರಿ