ಕೊಪ್ಪಳ: ಶಾಲೆ ರಜೆ ಇರುವ ಈ ಸಮಯದಲ್ಲಿ ಮನೆಯಲ್ಲಿ ಬೇಸರವಾಯಿತೆಂದು ಕೆರೆಗೆ ಈಜಲು ಹೋದ ಬಾಲಕರು ಅಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಿಶೋರ್ ಶಂಕ್ರಪ್ಪ ಶಿಳ್ಳೆಕ್ಯಾತರ್(11) ಮತ್ತು ಗವಿಸಿದ್ದಪ್ಪ ಗುರುರಾಜ್ ಬೋವಿ(10) ಮೃತ ಬಾಲಕರು . ಮನೆಯಿಂದ ಹೊರ ಹೋದ ಮಕ್ಕಳು ಎಷ್ಟು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಪೋಷಕರು ಮಕ್ಕಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬಾಲಕರ ಸ್ನೇಹಿತರನ್ನು ವಿಚಾರಿಸಿದಾಗ ಅವರು ಕೆರೆ ಬಳಿ ಹೋದ ವಿಚಾರ ತಿಳಿದುಬಂದಿದೆ.
ಗ್ರಾಮದಲ್ಲಿದ್ದ ಈಜು ತಜ್ಞರೇ ಕೆರೆಯಿಂದ ಶವ ಹೊರಗೆ ತೆಗೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.