ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ-20 ಸರಣೆಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಉದಯೋನ್ಮುಖ ಆಟಗಾರರಾದ ರಿಂಕು ಸಿಂಗ್ ಹಾಗೂ ಋತುರಾಜ್ ಗಾಯಕ್ವಾಡ್ರನ್ನು ಪರಿಗಣಿಸದೆ ಇರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಈ ಕುರಿತು ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಕಾರರು ಸೇರಿದಂತೆ ಅನೇಕ ಕ್ರೀಡಾಭಿಮಾನಿಗಳು ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನದ ಹೊರತ್ತಾಗಿಯೂ ಈ ಇಬ್ಬರು ಆಟಗಾರರನ್ನು ಆಯ್ಕೆ ಸಮಿತಿ ಕಡೆಗಣಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶೀಘ್ರದಲ್ಲೇ ಸಮಯ ಬಂದೇ ಬರುತ್ತದೆ ಎಂದು ಪರೋಕ್ಷವಾಗಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ತೋತಾಪುರಿ-2 ನಾಯಕರ ಫಸ್ಟ್ ಲುಕ್ ಬಿಡುಗಡೆ
ಋತುರಾಜ್, ರಿಂಕು ಆಯ್ಕೆ ಮಾಡದಿರುವ ಕುರಿತು ಟ್ವೀಟ್ ಮಾಡಿರುವ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಮುಂಬೈನ ಯುವ ಬ್ಯಾಟರ್ ತಿಲಕ್ ವರ್ಮಾರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿದ್ದು, ಫಿನಿಶರ್ ಸ್ಥಾನಕ್ಕೆ ರಿಂಕು ಸಿಂಗ್ ಹೆಚ್ಚು ಸೂಕ್ತವಾಗಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತ ರಿಂಕು ಸಿಂಗ್ ಹಾಗೂ ಋಉತುರಾಜ್ ಗಾಯಕ್ವಾಡ್ರನ್ನು ಆಯ್ಕೆ ಮಾಡದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳು ಬಿಸಿಸಿ ಹಾಗೂ ಆಯ್ಕೆ ಸಮಿತಿ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.