ಲಕ್ಷ್ಮೇಶ್ವರ: ಕೆಲವರ ಬದುಕಿನಲ್ಲಿ ವಿಧಿಯಾಟ ಬಲು ಘೊರವಾಗಿರುತ್ತದೆ. ಪಟ್ಟಣದ ಮಹಿಳೆ ಸುಮಂಗಲಾ (ಮೆಹರಭಾನು) ಇದಕ್ಕೆ ಸಾಕ್ಷಿ. ಅಂಧೆ ಹಾಗೂ ವಿಧವೆಯಾಗಿರುವ ಇವರು ಒಂದು ವರ್ಷದ ಅವಳಿ ಗಂಡುಮಕ್ಕಳ ರಕ್ಷಣೆಗೆ ಹೋರಾಟ ನಡೆಸಿದ್ದಾರೆ.
ಇವರ ಮೂಲ ಸವಣೂರು. ತಂದೆ ಮುಸ್ಲಿಂ ಹಾಗೂ ತಾಯಿ ಬ್ರಾಹ್ಮಣ ಸಮಾಜದವರು. ಈಕೆಗೊಬ್ಬ ತಂಗಿ ಇದ್ದಾಳೆ. ತಂಗಿ ಹುಟ್ಟಿದ ಕೆಲವೇ ವರ್ಷಗಳಲ್ಲಿ ತಾಯಿ ತೀರಿ ಹೋದರು. ಆಗ ತಂದೆ ಇಬ್ಬರು ಪುತ್ರಿಯರನ್ನು ಬಸ್ ಹತ್ತಿಸಿ ಕಳುಹಿಸಿದ್ದಾನೆ. 10-12 ವರ್ಷದ ಸುಮಂಗಲಾ ಮತ್ತು ಸಹೋದರಿ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಭಿಕ್ಷೆ ಬೇಡುತ್ತ ದೂದಪೀರಾಂ ದರ್ಗಾದಲ್ಲಿ ದಿನ ಕಳೆದಿದ್ದಾರೆ. ಕೆಲ ವರ್ಷಗಳ ನಂತರ ಸುಮಂಗಲಾಗೆ ಆಸರೆಯಾಗಿದ್ದ ತಂಗಿಯನ್ನು ಯಾರೋ ಕರೆದೊಯ್ದು ಜೋಪಾನ ಮಾಡಿದ್ದಾರೆ. ಈಗ ಎಲ್ಲಿದ್ದಾಳೆ ಎನ್ನುವುದು ಗೊತ್ತಿಲ್ಲ.
ಒಬ್ಬಂಟಿಯಾದ ಸುಮಂಗಲಾ ಪಟ್ಟಣದ ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಬಳಿಕ ಮನೆಗೆಲಸ ಕೇಳಿಕೊಂಡು ಹೋದಾಗ ಶಿಕ್ಷಕಿ ಶ್ರೀದೇವಿ ಹಿರೇಮಠ ಸುಮಂಗಲಾಗೆ ಅವರಿಗೆ ಅನ್ನ, ಆಶ್ರಯ ನೀಡಿದರು. ಓಣಿಯ ಹಿರಿಯರು 2018ರ ಡಿಸೆಂಬರ್ 18 ರಂದು ಆಕೆಯನ್ನು ಶಿಗ್ಗಾಂವಿ ಮೂಲದ ವೀರಣ್ಣ ಕಳಸ ಎಂಬ ಯುವಕನೊಂದಿಗೆ ಮದುವೆ ಮಾಡಿಕೊಟ್ಟರು. ಅಂದು ‘ಅನಾಥೆಯ ಕೈ ಹಿಡಿದ ವೀರಣ್ಣ’ ಎಂಬ ಸುದ್ದಿಯನ್ನು ‘ವಿಜಯವಾಣಿ’ ಪ್ರಕಟಿಸಿತ್ತು. ವರ್ಷದ ನಂತರ ಸಂತೋಷ ಮತ್ತು ಸತೀಶ ಎಂಬ ಅವಳಿ ಪುತ್ರರ ಜನನವಾಯಿತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ವೀರಣ್ಣ ಅಕಾಲಿಕವಾಗಿ ಮೃತಪಟ್ಟು ಸುಮಂಗಲಾ ಮತ್ತೆ ಅನಾಥೆಯಾದಳು. ಒಂದು ವರ್ಷದ ಕಂದಮ್ಮಗಳನ್ನು ಕಟ್ಟಿಕೊಂಡು ಶಿಗ್ಗಾಂವಿಯಿಂದ ಮತ್ತೇ ಲಕ್ಷ್ಮೇಶ್ವರಕ್ಕೆ ಬಂದ ಈಕೆಗೆ ಶಿಕ್ಷಕಿ ಶ್ರೀದೇವಿ ಹಿರೇಮಠ ಮತ್ತು ಇಮಾಮ್ೕ ನದಾಫ್ ಹಾಗೂ ಅನೇಕರು ಸೇರಿ ಪಟ್ಟಣದ ಎಪಿಎಂಸಿಯ ಮಲ್ಲಾಡದ ವಕಾರದ ಚಿಕ್ಕ ಕೋಣೆಯಲ್ಲಿ ಆಶ್ರಯ ಕಲ್ಪಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ದಿನಸಿ ಕಿಟ್ ವಿತರಿಸುವ ವೇಳೆ ಸುಮಂಗಲಾಳ ಕಷ್ಟ ಗೊತ್ತಾಗಿದೆ. ಅಂಗವಿಕಲರ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮದುವೆ ಪ್ರಮಾಣ ಪತ್ರವಿದೆ. ಸೂಕ್ತ ದಾಖಲೆ ಪಡೆದು ತಾಲೂಕಾಡಳಿತದಿಂದ ಕೊಡಬಹುದಾದ ಸೌಲಭ್ಯ ಕಲ್ಪಿಸಲಾಗುವುದು. ಅವರಿಗೆ ಸಹಾಯ ಮಾಡಬಯಸುವವರು ತಾಲೂಕಾಡಳಿತ, ಪುರಸಭೆ ಮತ್ತು ಪೊಲೀಸ್ ಇಲಾಖೆಯನ್ನು ಸಂರ್ಪಸಬಹುದು.
|ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್
ಸುಮಂಗಲಾ ಮತ್ತು ಅವಳಿ ಮಕ್ಕಳನ್ನು ನೆರೆಹೊರೆಯವರು ಕಾಳಜಿಯಿಂದ ಸಲಹುತ್ತಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಪ್ರತಿ ತಿಂಗಳು 1 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದಾರೆ. ಸುಮಂಗಲಾಳ ಬಗ್ಗೆ ತಾಲೂಕಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸರ್ಕಾರದಿಂದ ವಿಧವಾ ವೇತನ, ರೇಶನ್ ಕಾರ್ಡ್ ಇತರ ಸೌಲಭ್ಯ ಕಲ್ಪಿಸಬೇಕು.
| ಇಮಾಮ್ೕ ನದಾಫ್ ಮಲ್ಲಾಡದ ವಕಾರದ ನಿವಾಸಿ