More

    ಹೆದ್ದಾರಿ ಅಭಿವೃದ್ಧಿಗೆ ಗ್ರಹಣ

    ಬಣಕಲ್ (ಮೂಡಿಗೆರೆ ತಾ.): ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಾಳೂರು ಮೀಸಲು ಅರಣ್ಯದ ಚಾರ್ವಡಿ ಘಾಟ್ ಮೂಲಕ ಹಾದು ಹೋಗಿದ್ದು, 2019ರಲ್ಲಿ ಸುರಿದ ಭಾರೀ ಮಳೆಗೆ ಹಾನಿಗೀಡಾಗಿದೆ. ಘಾಟ್ ಭಾಗದ ಹೆದ್ದಾರಿಯ ಶಾಶ್ವತ ಅಭಿವೃದ್ದಿ ಕಾರ್ಯ ವರ್ಷ ಕಳೆದರೂ ಪ್ರಾರಂಭವಾಗಿಲ್ಲ.

    2019ರ ಮಳೆಗಾಲದಲ್ಲಿ ಚಾರ್ವಡಿ ಘಾಟ್​ನ ಹಲವೆಡೆ ಗುಡ್ಡ ಕುಸಿದು ಹೆದ್ದಾರಿಯಲ್ಲಿ ಕೆಲ ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಂತರ ತಾತ್ಕಾಲಿಕವಾಗಿ ದುರಸ್ಥಿ ಕಾಮಗಾರಿ ಆರಂಭಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ವಿುಸಿ ಸೂಚನಾ ಫಲಕ ಅಳವಡಿಸಿ ಲಘು ವಾಹನ ಸಂಚರಿಸುವ ಮಟ್ಟಿಗೆ ಅವಕಾಶ ಮಾಡಿಕೊಟ್ಟಿತ್ತು.

    ಇದಾಗಿ ವರ್ಷ ಕಳೆದರೂ ಚಾರ್ವಡಿ ಘಾಟ್ ಹೆದ್ದಾರಿ ಶಾಶ್ವತ ಅಭಿವೃದ್ದಿ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್ ಸೇರಿದಂತೆ ಘನ ವಾಹನ ಸಂಚಾರ ಮರೀಚಿಕೆಯಾಗಿದೆ. ಮಿನಿ ಬಸ್​ಗಳ ಸಂಚಾರಕ್ಕೆ ಅವಕಾಶವಿದ್ದರೂ ಬಸ್​ಗಳ ಸಂಖ್ಯೆ ಕಡಿಮೆ ಇರುವ ಕಾರಣ ಪ್ರಯಾಣಿಕರ ಸಮಸ್ಯೆ ತಪ್ಪಿದ್ದಲ್ಲ. ಸಂಜೆ 6 ಗಂಟೆ ನಂತರ ಮಿನಿ ಬಸ್​ಗಳ ಸಂಚಾರವೂ ಇಲ್ಲದಿರುವುದರಿಂದ ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಕರಾವಳಿ ಭಾಗಕ್ಕೆ ಹೋಗಿ ಬರುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

    ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ: ಚಾರ್ವಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸದ ಕಾರಣ ಈ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರವೂ ಕಡಿಮೆಯಾಗಿದ್ದು ಮೂಡಿಗೆರೆ ಹ್ಯಾಂಡ್​ಪೋಸ್ಟ್, ಬಣಕಲ್, ಕೊಟ್ಟಿಗೆಹಾರ, ಚಾರ್ವಡಿ ಮುಂತಾದ ಹೆದ್ದಾರಿ ಬದಿ ಅಂಗಡಿ ವ್ಯಾಪಾರ ಕುಸಿದಿದೆ. ಕೆಲ ಹೋಟೆಲ್, ಅಂಗಡಿಗಳು ಬಾಗಿಲು ಹಾಕಿವೆ. ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಪರ್ಯಾಯ ಆದಾಯ ಮೂಲಗಳತ್ತ ಮುಖ ಮಾಡುತ್ತಿವೆ. ಕೊಟ್ಟಿಗೆಹಾರದ ಸರ್ಕಾರಿ ಬಸ್​ನಿಲ್ದಾಣದಲ್ಲಿ ಅಂಗಡಿ, ಹೋಟೆಲ್ ನಡೆಸುತ್ತಿದ್ದ ವರ್ತಕರು ಕೆಎಸ್​ಆರ್​ಟಿಸಿ ಬಸ್ ಸಂಚಾರ ಇಲ್ಲದೆ ಅಂಗಡಿ ಹೋಟೆಲ್ ಮುಚ್ಚಿದ್ದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಹೆಚ್ಚಿದ ಸಾಗಣೆ ವೆಚ್ಚ: ವ್ಯಾಪಾರಸ್ಥರು ಕರಾವಳಿ ಭಾಗದಿಂದ ಮನೆ ನಿರ್ವಣದ ಸಾಮಗ್ರಿ, ರಾಸಾಯನಿಕ ಗೊಬ್ಬರ, ಗ್ಯಾಸ್, ಸಿಮೆಂಟ್, ಮುಂತಾದ ವಸ್ತುಗಳನ್ನು ಮಲೆನಾಡಿಗೆ ತರಲು ಈ ಮುಂಚೆ ಚಾರ್ವಡಿ ಘಾಟ್ ಮಾರ್ಗ ಬಳಸುತ್ತಿದ್ದರು. ಈಗ ಸುತ್ತಿ ಬಳಸಿ ಶಿರಾಡಿ ಘಾಟ್ ಮಾರ್ಗದಲ್ಲಿ ತರಬೇಕಿದ್ದು, ಸಾಗಣೆ ವೆಚ್ಚ ಹೆಚ್ಚಿದ ಕಾರಣ ಸಹಜವಾಗಿ ಈ ವಸ್ತುಗಳ ಬೆಲೆಯೂ ಹೆಚ್ಚಳವಾಗಿದೆ. ಉದಾಹರಣೆಗೆ ಚಾರ್ವಡಿ ಘಾಟ್​ನಲ್ಲಿ ಘನ ವಾಹನಗಳು ಸಂಚರಿಸುವಾಗ ಮಂಗಳೂರು ಕಡೆಯಿಂದ ಬರುವ ಮಂಗಳೂರು ಇಟ್ಟಿಗೆ ಬೆಲೆ ರೂ. 43 – 44 ಇತ್ತು. ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಈಗ ಇಟ್ಟಿಗೆ ಬೆಲೆ 54 ರೂಗೆ ಏರಿದೆ. ಈ ಮೊದಲು ಒಂದು ಲಾರಿ ಎಂ ಸ್ಯಾಂಡ್ ಬೆಲೆ 17 ಸಾವಿರ ರೂ ಇತ್ತು. ಈಗ 23 ರಿಂದ 24 ಸಾವಿರ ರೂ ಆಗಿದೆ. ಜಲ್ಲಿ, ಹೆಂಚು ಮುಂತಾದ ವಸ್ತುಗಳ ಬೆಲೆಯೂ ಏರಿದೆ.

    ಸದ್ಯಕ್ಕೆ ಡಾಂಬಾರೀಕರಣ, ತಡೆಗೋಡೆ ಅಷ್ಟೆ: 19.3 ಕೋಟಿ ರೂ. ವೆಚ್ಚದಲ್ಲಿ ಚಾರ್ವಡಿ ಘಾಟ್ ಹೆದ್ದಾರಿಯಲ್ಲಿ 6 ತಡೆಗೋಡೆ ನಿರ್ವಿುಸಲು ಟೆಂಡರ್ ಕರೆಯಲಾಗಿದ್ದು ಈ ತಿಂಗಳ 5 ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚಿಕ್ಕಮಗಳೂರು ವ್ಯಾಪ್ತಿಯ 13 ಕಿ.ಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 12 ಕಿ.ಮೀ. ಸೇರಿ ಚಾರ್ವಡಿ ಗ್ರಾಮದಿಂದ ಕೊಟ್ಟಿಗೆಹಾರದವರೆಗೆ 25 ಕಿ.ಮಿ ಹೆದ್ದಾರಿಯನ್ನು 9.9 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಿ ಮಳೆಯ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಚಾರ್ವಡಿ ಘಾಟ್ ಹೆದ್ದಾರಿ ಉಳಿಸಿ ಅಭಿಯಾನ: ವರ್ಷ ಕಳೆದರೂ ಚಾರ್ವಡಿ ಘಾಟ್ ಹೆದ್ದಾರಿ ಅಭಿವೃದ್ದಿಪಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದಿರುವ ಕಾರಣ ಚಾರ್ವಡಿ ಹಾಗೂ ಕೊಟ್ಟಿಗೆಹಾರ ಭಾಗದ ಸ್ಥಳೀಯರು, ವರ್ತಕರು, ವಾಹನ ಚಾಲಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಸಾರ್ವಜನಿಕರು ಚಾರ್ವಡಿ ಘಾಟ್ ಹೆದ್ದಾರಿ ಉಳಿಸಿ ಅಭಿಯಾನ ಪ್ರಾರಂಭಿಸಿದ್ದಾರೆ. ಹಂತ ಹಂತವಾಗಿ ಈ ಅಭಿಯಾನದ ಮೂಲಕ ಚಾರ್ವಡಿ ಘಾಟ್ ಅಭಿವೃದ್ದಿ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಲು ಒತ್ತಾಯಿಸಲಾಗುತ್ತಿದ್ದು ಕಳೆದ ವಾರ ಚಾರ್ವಡಿ ಘಾಟ್ ಹೆದ್ದಾರಿ ಉಳಿಸಿ ಜಾಥಾವನ್ನು ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts