ತಿರುಪತಿ: ಲಾಕ್ಡೌನ್ನಿಂದಾಗಿ ಎಂಥೆಂತವರೋ ಕಂಗಾಲಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇರೆ ಬೇಕಿಲ್ಲವೇನೋ?
ಜಗತ್ತಿನ ಅತಿ ಶ್ರೀಮಂತ ಹಿಂದು ದೇವಾಲಯ ಎಂಬ ಖ್ಯಾತಿಗೆ ಒಳಗಾಗಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭಕ್ತರಿಂದ ಹಾಗೂ ವಿವಿಧ ಸೇವೆಗಳಿಂದ ಪ್ರತಿ ತಿಂಗಳು 200 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಆದರೆ, ಕಳೆದೆರಡು ತಿಂಗಳಿನಿಂದ ದೇಗುಲ ಬಂದ್ ಆಗಿರುವುದರಿಂದ ಭಕ್ತರು ಬರುತ್ತಿಲ್ಲ, ಆದಾಯವೂ ಇಲ್ಲ. ಸಿಬ್ಬಂದಿಯ ಸಂಬಳ ನೀಡಲು ಆಡಳಿತ ಮಂಡಳಿ ಪರದಾಡುತ್ತಿದೆ. ಜೂನ್ನಲ್ಲೂ ದರ್ಶನ ಆರಂಭವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಇದನ್ನೂ ಓದಿ; ಹೋಟೆಲ್ಗೆ ಕನ್ನ ಹಾಕಿದವರು ಹಸಿವನ್ನಷ್ಟೇ ತೀರಿಸಿಕೊಂಡರು…!
ಹಣಕಾಸು ಸಂಕಷ್ಟದಿಂದ ಪಾರಾಗಲು ಆಡಳಿತ ಮಂಡಳಿ ದೇಶದ ವಿವಿಧ ಭಾಗಗಳಲ್ಲಿರುವ ಭೂಮಿ ಹಾಗೂ ಕಟ್ಟಡಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಭಕ್ತರು ದೇಗುಲಕ್ಕೆ ದಾನವಾಗಿ ನೀಡಿದ ಈ ಆಸ್ತಿ ಯಾವುದೇ ಉದ್ದೇಶಕ್ಕೂ ಬಳಕೆಯಾಗುತ್ತಿಲ್ಲ. ಕರೊನಾದಿಂದಾಗಿ ಉಂಟಾಗಿರುವ ಸಂಕಷ್ಟದಿಂದ ಪಾರಾಗಲು ಇದನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಚೆನ್ನೈ, ಮುಂಬೈ ಸೇರಿ ವಿವಿಧ ಭಾಗಗಳಲ್ಲಿರುವ ಕಟ್ಟಡಗಳು, ಕಾಟೇಜ್ಗಳು, ಭೂಮಿ ಮೊದಲಾದವುಗಳು ಹಲವು ವರ್ಷಗಳಿಂದ ಬಳಕೆಯಾಗದೇ ನಿಷ್ಪ್ರಯೋಜಕ ಎನಿಸಿವೆ. ಇವುಗಳ ಮೌಲ್ಯ ಸಾವಿರಾರು ಕೋಟಿ ರೂ.ಗಳಾಗಲಿದೆ. ಆದರೆ, ಪ್ರಸ್ತುತ 500 ಕೋಟಿ ರೂ. ಮೌಲ್ಯದ ಸ್ವತ್ತನ್ನಷ್ಟೇ ಮಾರಾಟಕ್ಕಾಗಿ ಗುರುತಿಸಲಾಗಿದೆ.
ಇದನ್ನೂ ಓದಿ; ಇಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಊರು ಸೇರಿದ
ಈ ಸಾಲಿನಲ್ಲಿ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು 1,351 ಕೋಟಿ ರೂ. ಅಂದರೆ ಪ್ರತಿದಿನ 3.5 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಇನ್ನು ಲಡ್ಡು ಮಾರಾಟ, ವಿಶೇಷ ಸೇವೆ, ದರ್ಶನ ಮೊದಲಾದವುಗಳಿಂದ 900 ಕೋಟಿ ರೂ. ನಿರೀಕ್ಷಿಸಲಾಗಿತ್ತು.
ಟಿಟಿಡಿಯಲ್ಲಿ ಕಾಯಂ ಹಾಗೂ ಗುತ್ತಿಗೆ ಸೇರಿ ಅಂದಾಜು 22,000 ಸಿಬ್ಬಂದಿ ಇದ್ದಾರೆ. ಇವರಿಗೆ ಪ್ರತಿ ತಿಂಗಳು 115 ಕೋಟಿ ರೂ. ಸಂಬಳ ಪಾವತಿಸಬೇಕಿದೆ. ಅಂದಾಜು 7,000 ಜನರಿಗೆ ಮಾರ್ಚ್ನಿಂದ ಶೇ.50 ಸಂಬಳವನ್ನಷ್ಟೇ ಪಾವತಿಸಲಾಗುತ್ತಿದೆ.