ಕಾರವಾರ: ಜೂನ್ 11ರಂದು ಸಿಎಂ ಜತೆ ಸಭೆ ಮಾಡಿ, ರ್ಚಚಿಸಿ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಬಂದರು ಹಾಗೂ ಮೀನುಗಾರಿಕೆ ಸಚಿವ ಎಸ್.ಅಂಗಾರ ತಿಳಿಸಿದರು.
ತಾಲೂಕಿನ ವಾಣಿಜ್ಯ ಬಂದರು, ಬೈತಖೋಲ ಮೀನುಗಾರಿಕೆ ಬಂದರನ್ನು ವೀಕ್ಷಿಸಿ, ಮಾಜಾಳಿಯಲ್ಲಿ ಮೀನುಗಾರರ ಜತೆ ರ್ಚಚಿಸಿ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಕಳೆದ ವರ್ಷದ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲೂ ಮೀನುಗಾರರಿಗೆ ಪರಿಹಾರ ಸಿಕ್ಕಿಲ್ಲ. ಈ ಬಾರಿ ತೌಕ್ತೆ ಚಂಡ ಮಾರುತದಿಂದ ಸಾಕಷ್ಟು ಹಾನಿಯಾಗಿದೆ. ಅಧಿಕಾರಿಗಳು ಅದರ ವರದಿ ನೀಡಿದ್ದಾರೆ. ಆದರೆ, ಸ್ವತಃ ಬಂದು ವೀಕ್ಷಿಸಿ ಸಮಸ್ಯೆ ಗಾಂಭೀರ್ಯತೆ ಅರಿತಿದ್ದೇನೆ ಅದನ್ನು ಸಿಎಂ ಅವರ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ಕೊಡಿಸಲು ಯತ್ನಿಸಲಾಗುವುದು ಎಂದರು.
ಈಗಾಗಲೇ ಮೀನುಗಾರರಿಗೆ ಸಿಎಂ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ಅದರ ವಿತರಣೆ ಬಗ್ಗೆ ರೂಪುರೇಷೆ ಸಿದ್ಧಗೊಂಡಿಲ್ಲ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮವಹಿಸಲಿದ್ದಾರೆ.
ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಹೆಚ್ಚುವರಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇನ್ನು ಡೀಸೆಲ್ ಸಹಾಯಧನ ಬಿಡುಗಡೆ ಮಾಡುವುದು ಬಾಕಿ ಇದೆ. ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಆತಂಕ ಬೇಡ: ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ ಮಾಡಿದರೆ ನಾಡದೋಣಿ ಮೀನುಗಾರರಿಗೆ ತೊಂದರೆ ಉಂಟಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿರುವುದು ಕಂಡುಬಂತು. ಅಂಥ ಯಾವುದೇ ಸಂಶಯ ಬೇಡ. ನಾಡದೋಣಿಗಳನ್ನೂ ಗಮನದಲ್ಲಿಟ್ಟುಕೊಂಡು ಆಧುನಿಕ ತಾಂತ್ರಿಕತೆಯಂತೆ ಬಂದರು ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಶಾಸಕಿ ರೂಪಾಲಿ ನಾಯ್ಕ ಇದ್ದರು.
ನಾಯಕತ್ವ ಮುಖ್ಯವಲ್ಲ
ನಾನು ಅಧಿಕಾರ ಅಪೇಕ್ಷಿಸುವುದಿಲ್ಲ. ನಾನು ಒಂದು ಸಂಘಟನೆಯಡಿ, ವಿಚಾರದ ಅಡಿ ಬಂದವ. ನನಗೆ ಸಂಘಟನೆ ಮುಖ್ಯ.ನನಗೆ ನಾಯಕತ್ವದ ಪ್ರಶ್ನೆಯೇ ಬರುವುದಿಲ್ಲ. ಪರಿಸ್ಥಿತಿ ಅರಿತುಕೊಂಡು ಅದಕ್ಕನುಗುಣವಾಗಿ ಕೆಲಸ ಮಾಡಬೇಕು. ಈಗ ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರಿದ್ದಾರೆ. ನಾನು ಯಾರ ನಾಯಕತ್ವ ಇದ್ದರೂ ಅದರಡಿ ನಡೆದುಕೊಂಡು ಹೋಗುತ್ತೇನೆ. ನನಗೇನೂ ಅಸಮಾಧಾನವಿಲ್ಲ ಎಂದು ಎಸ್.ಅಂಗಾರ ಹೇಳಿದರು.