ಭೋಪಾಲ್: ಮಧ್ಯಪ್ರದೇಶದ ರಾಜಕೀಯದಲ್ಲಿ ಮಂಗಳವಾರ ಮಧ್ಯರಾತ್ರಿ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಗಂಡಾಂತರ ಎದುರಾಗಿದೆ.
ಕಾಂಗ್ರೆಸ್ ನಾಲ್ವರು ಶಾಸಕರು ಹಾಗೂ ಸರ್ಕಾರಕ್ಕೆ ಬೆಂಬಲ ನೀಡಿದ್ದ ನಾಲ್ವರು ಪಕ್ಷೇತರ ಶಾಸಕರು ಸೇರಿ ಒಟ್ಟು 8 ಮಂದಿ ಶಾಸಕರು ಗುರುಗ್ರಾಮದ ಹೋಟೆಲ್ಗೆ ಸ್ಥಳಾಂತರಗೊಂಡಿದ್ದು, ಬಿಜೆಪಿಯ ಮಾಜಿ ಸಚಿವರೊಬ್ಬರು ಶಾಸಕರನ್ನು ಹೋಟೆಲ್ನಲ್ಲಿ ಹಿಡಿದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಧ್ಯಪ್ರದೇಶ ಅರ್ಥ ಸಚಿವ ತರುಣ್ ಬಾನೋಟ್, ನಮ್ಮ ಶಾಸಕರನ್ನು ಬಲವಂತವಾಗಿ ಗುರುಗ್ರಾಮದ ಐಟಿಸಿ ಮರಾಠಾ ಹೋಟೆಲ್ನಲ್ಲಿ ಹೊರಗೂ ಹೋಗದಂತೆ ಹಿಡಿದಿಟ್ಟಿರುವುದಾಗಿ ನಮ್ಮ ಶಾಸಕರೊಬ್ಬರು ತಿಳಿಸಿದ್ದಾರೆ. ಹೋಟೆಲ್ನಲ್ಲಿರುವ ಶಾಸಕರ ದೂರವಾಣಿ ಕರೆ ಸ್ವೀಕರಿಸದ ಬಳಿಕ ಅಲ್ಲಿರುವ 8 ಶಾಸಕರನ್ನು ಭೇಟಿ ಮಾಡಲು ನಮ್ಮಿಬ್ಬರು ಸಚಿವರಾದ ಜೈವರ್ಧನ್ ಸಿಂಗ್ ಮತ್ತು ಜೀತು ಪಟ್ವಾರಿ ಅವರು ತೆರಳಿದ್ದರು. ಆದರೆ, ಹೋಟೆಲ್ ಪ್ರವೇಶಿಸಲು ಅನುಮತಿ ನೀಡಲಿಲ್ಲ ಎಂದು ದೂರಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಅಲ್ಲಿನ ಸರ್ಕಾರದ ನೆರವಿನಿಂದ ನಮ್ಮ ಶಾಸಕರನ್ನು ಬಂಧಿಸಿದ್ದಾರೆ. ಹರಿಯಾಣ ಪೊಲೀಸ್ ಮತ್ತು ಮಧ್ಯಪ್ರದೇಶದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ನಾರೊಟ್ಟಮ್ ಮಿಶ್ರಾ ಅವರು ನಮ್ಮ ಸಚಿವರಿಗೆ ಹೋಟೆಲ್ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಅವರನ್ನು ಬಲವಂತವಾಗಿ ಕೂಡಿ ಹಾಕಿದ್ದಾರೆ ಎಂದು ಬಾನೋಟ್ ಪುನರುಚ್ಛರಿಸಿದರು.
ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಆಮಿಷವೊಡ್ಡುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರೋಪಿಸಿದ ದಿನದ ಬೆನ್ನಲ್ಲೇ 8 ಶಾಸಕರು ಗುರುಗ್ರಾಮ್ ಹೋಟೆಲ್ನಲ್ಲಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಾರೊಟ್ಟಮ್ ಮಿಶ್ರಾ ಕಾಂಗ್ರೆಸ್ ಶಾಸಕರಿಗೆ ಸುಮಾರು 25 ರಿಂದ 35 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ದಿಗ್ವಿಜಯ ಸಿಂಗ್ ದೂರಿದ್ದರು.
ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್ ನಂಬರ್ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್ಪಿ 2, ಎಸ್ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು, ದಿಢೀರ್ ಬೆಳವಣಿಗೆಯಿಂದ ಮಧ್ಯಪ್ರದೇಶ ರಾಜಕೀಯ ಯಾವೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
#WATCH Haryana: Madhya Pradesh Ministers&Congress leaders Jitu Patwari&Jaivardhan Singh leave from ITC Resort in Gurugram's Manesar,taking suspended BSP MLA Ramabai with them.8 MLAs from MP are reportedly being held against their will by BJP at the hotel,Ramabai being one of them pic.twitter.com/VUivVHsaA4
— ANI (@ANI) March 3, 2020