ಶಿವಮೊಗ್ಗ: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗದ ಗುರುಪುರ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಮತ್ತು ರಾಷ್ಟ್ರಧ್ವಜ ಸುಟ್ಟಿರುವ ಹಾಗೂ ಚಾಕು ಇರಿತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್ಐಎ(ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಮಂಗಳವಾರ ರಾತ್ರಿ, ಬುಧವಾರ ಬೆಳಗ್ಗೆ ಆರೋಪಿಗಳಿಬ್ಬರನ್ನು ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಕರೆತಂದು ಸ್ಥಳ ಮಹಜರ್ ನಡೆಸಿದರು.
ಕುಕ್ಕರ್ ಬ್ಲಾಸ್ಟ್, ಟ್ರಯಲ್ ಬ್ಲಾಸ್ಟ್ನ ಪ್ರಮುಖ ಆರೋಪಿ ಶಾರೀಖ್ ಮತ್ತು ಚಾಕು ಇರಿತದ ಪ್ರಮುಖ ಆರೋಪಿ ಮೊಹಮ್ಮದ್ ಜಬೀಯನ್ನು ನಗರದ ಹೋಟೆಲ್ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆತಂದು ಮಹಜರ್ ನಡೆಸಿ ಕೆಲ ಮಾಹಿತಿ ಕಲೆಹಾಕಿದರು. ಜಬೀಯನ್ನು ಇಲಾಖೆ ವಾಹನದಲ್ಲೇ ಕೂರಿಸಿದ್ದ ಎನ್ಐಎ ಅಧಿಕಾರಿಗಳು ಶಾರೀಖ್ನನ್ನು ಮಾತ್ರ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದು ವಿಶೇಷವಾಗಿತ್ತು.
ಶಾರೀಖ್ಗೆ ಮಾಸ್ಕ್ ಹಾಕಿಸಿಕೊಂಡು ನಗರದ ಪ್ರಮುಖ ಸ್ಥಳಗಳಲ್ಲಿ ಕರೆದುಕೊಂಡು ಓಡಾಡಿದ ಎನ್ಐಎ ಸಿಬ್ಬಂದಿ ಮಹಜರ್ ಪ್ರಕ್ರಿಯೆ ಮಾಡಿದ್ದಾರೆ. ಕಳೆದ 2022ರ ಸೆ.19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಕೇಸ್ ಮತ್ತು ನ.15ರಂದು ದಾಖಲಿಸಿದ್ದ ಕೇಸ್ನನ್ವಯ ತನಿಖೆ ನಡೆಸುತ್ತಿದೆ.
ಆ.15ರಂದು ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಪ್ರೇಮ್ಸಿಂಗ್ ಎಂಬಾತನನ್ನು ಚಾಕುವಿನಿಂದ ಇರಿದ ಪ್ರಕರಣದಲ್ಲಿ ಮೊಹಮ್ಮದ್ ಜಬೀಯನ್ನು ಬಂಧಿಸಿದ್ದು ನಂತರ ಎನ್ಐಎಗೆ ಒಪ್ಪಿಸಲಾಗಿತ್ತು. ಶಾರೀಖ್ ಮತ್ತು ಮೊಹಮ್ಮದ್ ಜಬೀಗೆ ಸಂಪರ್ಕ ಇರುವ ಕಾರಣ ಜಬೀಯನ್ನು ಶಾರೀಖ್ ಜತೆ ಕರೆತಂದಿದ್ದರು.