ಬೆಂಗಳೂರು: ಪರ ಊರಿನ ಮೂಲದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಲ್ಲರೂ ಎಚ್ಚರ ವಹಿಸಲೇಬೇಕು. ಬೆಂಗಳೂರಿನ ದಕ್ಷಿಣ ವಿಭಾಗದ ಎರಡು ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಈ ಸಂದರ್ಭ ಬರೋಬ್ಬರಿ 23 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಒಟ್ಟು 2 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲ್, ವಿದೇಶಿ ಕರೆನ್ಸಿ ದೋಚಿದ್ದರು ಎನ್ನಲಾಗಿದ್ದು ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತರು ಎಲ್ಲರೂ ನೇಪಾಳ ಮೂಲದರಾಗಿದ್ದು ಎಂಟು ಆರೋಪಿಗಳನ್ನು ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೇತ್ರಾ ಶಾಹಿ (43), ಲಕ್ಷ್ಮಿ ಸೇಜುವಲ್ (33), ಗೋರಕ್ ಬಹದ್ದೂರ್ (50) ಭೀಮ್ ಬಹದ್ದೂರ್ (45), ಅಂಜಲಿ(31) ಅಬೇಶ್ ಶಾಹಿ (21) ಪ್ರಶಾಂತ್ (21) ಪ್ರಕಾಶ್ (31) ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲನೆ ಪ್ರಕರಣ:
ಕಿರಣ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ಎಂಬ ಆರೋಪಿಗಳು ಅಲ್ಲಿ ಸಮಯ ನೋಡಿಕೊಂಡು ಕಳ್ಳತನ ಮಾಡಿದ್ದರು. ಕಿರಣ್ ಪೋಷಕರು ತಿರುಪತಿಗೆ ತೆರಳಿದ್ದಾಗ ಆರೋಪಿಗಳ ತಂಡ ಮನೆಯಲ್ಲಿ ಕಳ್ಳತನ ಮಾಡಿದೆ.
ಹೀಗಾಗಿ ಕಿರಣ್, ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು, ಪಿಸ್ತೂಲ್, 3 ಜೀವಂತ ಗುಂಡುಗಳು ವಶಕ್ಕೆ ಪಡೆದಿದ್ದಾರೆ.
ಎರಡನೇ ಪ್ರಕರಣ:
ಈ ಪ್ರಕರಣದಲ್ಲಿ ವಯೋವೃದ್ದ ಮಹಿಳೆಯಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್ ಎಂಬುವವರನ್ನು ಬಂಧಿಸಲಾಗಿದೆ. ವಿಮಲಾ ಎಂಬಾಕೆ ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದಳು. ಮಾಲೀಕ ಕೆಲಸಕ್ಕೆ ಹೋದಾಗ ಆತನ ಮನೆಯಲ್ಲಿ ತನ್ನ ಗ್ಯಾಂಗ್ನೊಂದಿಗೆ ಈಕೆ ಕಳ್ಳತನ ಮಾಡಿದ್ದಾಳೆ. ಈ ಬಂಧಿತರಿಂದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆಯಲಾಗಿದೆ.
ಮೂರನೇ ಪ್ರಕರಣ:
ಈ ಪ್ರಕರಣದಲ್ಲಿ ದಂಪತಿ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಇವರು ಮಾಡಿದ್ದೂ ಅದನ್ನೇ. ಉಂಡ ಮನೆಗೆ ಕನ್ನ ಹಾಕಿದ್ದು. ಜಯನಗರ ಠಾಣಾ ಪೊಲೀಸರು ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಎನ್ನುವವರನ್ನು ಬಂಧಿಸಿದ್ದಾರೆ.
ಬಿಕಾಸ್ ಹಾಗೂ ಸುಷ್ಮಿತಾ ದಂಪತಿ, ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದರು. ಸಮಯ ಸಂದರ್ಭ ನೋಡಿಕೊಂಡು ತಮ್ಮ ಗ್ಯಾಂಗ್ ಜತೆ ಕೂಡಿಕೊಂಡು ಕಳ್ಳತನ ಮಾಡಿದ್ದಾರೆ.
ಬಂಧಿತರಿಂದ ಒಟ್ಟು 292 ಗ್ರಾಂ ಚಿನ್ನಾಭರಣ, 15 ಸಾವಿರ ನಗದು, 168 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದಷ್ಟೇ ಅಲ್ಲದೇ ಇವರು ಕದ್ದಿದ್ದ ವಿವಿಧ ಬ್ರ್ಯಾಂಡ್ನ 18 ವಾಚ್ಗಳು ತಲಾ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.