ಮಂಗಳೂರು: ಬೈಕಂಪಾಡಿ ಮೀನಕಳಿಯ ಸಮುದ್ರ ತೀರದಲ್ಲಿ ಶನಿವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಬೀಸಿದ ಭೀಕರ ಸುಳಿಗಾಳಿಗೆ ಸುಮಾರು 10 ಮನೆ ಹೆಂಚು ಹಾಗೂ ಸಿಮೆಂಟ್ ಶೀಟ್ಗಳು ಹಾರಿ ಹೋಗಿವೆ.
ಕೆಲವು ನಿಮಿಷಗಳಷ್ಟೇ ಬೀಸಿದ ಸುಳಿಗಾಳಿಯ ಪರಿಣಾಮ ಅನಾಹುತಕಾರಿಯಾಗಿತ್ತು. ಕೆಲವು ಮನೆಗಳು ದುರಸ್ತಿಯಾಗದೆ ಕುಳಿತುಕೊಳ್ಳುವುದು ಅಸಾಧ್ಯ. ಈ ಸಂದರ್ಭ ಸ್ಥಳದಲ್ಲಿದ್ದ ದೃಶ್ಯ ಮಾಧ್ಯಮದ ಕ್ಯಾಮರಾಮನ್ ಕೈಯಲ್ಲಿದ್ದ ದೊಡ್ಡ ಕೊಡೆ ಮುರಿದು ಹೋಗಿದ್ದು, ಕ್ಯಾಮರಾ ಕೆಳಗೆ ನೆಲಕ್ಕೆ ಉರುಳಿದೆ. ಓರ್ವ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಗಣೇಶ್ ಬೋಳೂರು ತಿಳಿಸಿದ್ದಾರೆ.
ಸಿಮೆಂಟ್ ಶೀಟ್ ಹಾಗೂ ಹೆಂಚುಗಳು ಹಾರಿದ ಮನೆಯ ನಿವಾಸಿಗಳು ಮನೆಯಲ್ಲಿದ್ದ ಕೆಲವು ಅಮೂಲ್ಯ ವಸ್ತುಗಳ ಜತೆ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಈ ಪ್ರದೇಶದಲ್ಲಿ ಕಡಲ್ಕೊರೆತದಿಂದ ಮೀನುಗಾರಿಕಾ ಕಾಂಕ್ರೀಟ್ ಮುರಿದು ಹೋಗಿತ್ತು.