ಮುಳಬಾಗಿಲು : ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿದ್ದ ಟೊಮ್ಯಾಟೊ ದರದಲ್ಲಿ ಇದೀಗ ಏರಿಕೆ ಕಂಡಿದ್ದು, ಇದರಿಂದ ರೈತರ ಮೊಗದಲ್ಲಿ ಸಂತಸ ಕಂಡಿದೆ.
ಈ ಬಾರಿ ಉತ್ತಮ ಇಳುವರಿಯಾದ್ದರಿಂದ 15 ಕೆಜಿ ಬಾಕ್ಸ್ ಒಂದಕ್ಕೆ 200ರಿಂದ 300 ರೂ.ವರೆಗೂ ಗುರುವಾರ ಸಗಟು ದರದಲ್ಲಿ ಮಾರಾಟವಾಗಿದೆ. ಎನ್ .ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 20 ಸಾವಿರ ಟೊಮ್ಯಾಟೊ ಬಾಕ್ಸ್ಗಳು ಆವಕವಾಗುತ್ತಿದ್ದವು. ಉತ್ತಮ ಇಳುವರಿಯಿಂದ ಇದೀಗ 60 ಸಾವಿರ ಬಾಕ್ಸ್ಗಳು ಎಪಿಎಂಸಿಗೆ ಪೂರೈಕೆಯಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಭಾರತದಲ್ಲೂ ಬೇಡಿಕೆ: ದೇಶದ ವಿವಿದೆಡೆಗೆ 40 ಕ್ಕೂ ಅಧಿಕ ಲಾರಿಗಳಿಂದ ಎನ್.ವಡ್ಡಹಳ್ಳಿ ಎಪಿಎಂಸಿಯಿಂದ ಟೊಮ್ಯಾಟೊ ಸರಬರಾಜಾಗುತ್ತಿದೆ. ಇದುವರೆಗೆ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಕೇರಳ, ಗೋವಾ, ಪಾಂಡಿಚೇರಿ, ಮಹಾರಾಷ್ಟ್ರ ಕಡೆಗೆ ಮಾತ್ರ ಪೂರೈಕೆಯಾಗುತ್ತಿದ್ದ ನಾಟಿ ಹೈಬ್ರೀಡ್ ಟೊಮ್ಯಾಟೊಗೆ ಈಗ ಉತ್ತರ ಭಾರತದಲ್ಲೂ ಅತಿ ಹೆಚ್ಚು ಬೇಡಿಕೆ ಬಂದಿದೆ. ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನಕ್ಕೂ ನಾಟಿ ಹೈಬ್ರಿಡ್ ಟೊಮ್ಯಾಟೊ ಪೂರೈಕೆಯಾಗುತ್ತಿದೆ.
ಎನ್.ವಡ್ಡಹಳ್ಳಿ ಮಾರುಕಟ್ಟೆಗೆ ಈ ಹಿಂದೆ 20 ಸಾವಿರ ಬಾಕ್ಸ್ಗಳು ಬರುತ್ತಿತ್ತು. ಈಗ 60 ಸಾವಿರಕ್ಕೂ ಹೆಚ್ಚು ಬಾಕ್ಸ್ಗಳಲ್ಲಿ ಟೊಮ್ಯಾಟೊವನ್ನು ರೈತರು ಮಾರುಕಟ್ಟಗೆ ತರುತ್ತಿದ್ದಾರೆ. ದೆಹಲಿ ಸೇರಿ ಉತ್ತರ ಭಾರತದ ಕಡೆಗೆ ವಡ್ಡಹಳ್ಳಿ ಮಾರುಕಟ್ಟೆಯಿಂದ ಟೊಮ್ಯಾಟೊ ಪ್ರತಿನಿತ್ಯ 40 ಲಾರಿಗಳಲ್ಲಿ ಸಾಗಾಣಿಕೆಯಾಗುತ್ತಿದ್ದು, ಬೆಲೆ ಏರಿಕೆ ಮುಂದುವರಿಯುತ್ತಿದೆ.
ನಗವಾರ ಎನ್.ಆರ್.ಸತ್ಯಣ್ಣ, ನಿರ್ದೇಶಕ, ಎನ್.ವಡ್ಡಹಳ್ಳಿ ಎಪಿಎಂಸಿಬೆಳೆಗೆ ಉತ್ತಮ ಬೆಲೆ ಸಿಕ್ಕಿ ಉತ್ತಮ ಬೆಳೆ ಬಂದರೆ ಕೃಷಿ ಮಾಡಲು ಆಸಕ್ತಿ ಇರುತ್ತದೆ. ಅತಿವೃಷ್ಟಿ, ಅನಾವೃಷ್ಟಿ ಮಧ್ಯೆ ರೈತ ಬದುಕಬೇಕಿದ್ದು, ಈಗ ಟೊಮ್ಯಾಟೊಗೆ ಉತ್ತಮ ಬೆಲೆ ಬಂದಿರುವುದು ಸಂತಸ ತಂದಿದೆ.
ಪಿ.ಎಸ್.ಗಂಗಾಧರ್, ಪೆತ್ತಾಂಡ್ಲಹಳ್ಳಿ ರೈತ,