ಇಂಫಾಲ್: ಟೋಕಿಯೋ ಒಲಿಂಪಿಕ್ಸ್ನ ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಪ್ರತಿಯೊಬ್ಬರು ವಾಟ್ಸ್ಅಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮೀರಾಬಾಯಿ ಚಾನು ಫೋಟೋ ಶೇರ್ ಮಾಡಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದೀಗ ಮೀರಾಬಾಯಿ ಚಾನು ಸಾಧನೆಗೆ ತಲೆಬಾಗಿರುವ ಮಣಿಪುರ ಸರ್ಕಾರ ಮೀರಾಗೆ ಬಹುಮಾನವಾಗಿ 1 ಕೋಟಿ ರೂಪಾಯಿಗಳನ್ನು ಘೋಷಿಸಿದೆ. ಮೀರಾಬಾಯಿ ಮಣಿಪುರ ಮೂಲದವರು. ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಗೌರವಪೂರ್ವಕವಾಗಿ ಮಣಿಪುರ ಮುಖ್ಯಮಂತ್ರಿ ಎನ್. ಬೈರೆನ್ ಸಿಂಗ್ ಶನಿವಾರ ಒಂದು ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಮೀರಾಬಾಯಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ. ಪ್ರಸ್ತುತ ಮೀರಾಬಾಯಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪದಕ ಗೆದ್ದ ಬಳಿಕ ಮೀರಾಬಾಯಿ ಜತೆ ಮಾತನಾಡಿದ ವಿಡಿಯೋವನ್ನು ಸಿಎಂ ಬೈರೆನ್ ಸಿಂಗ್ ಶೇರ್ ಮಾಡಿಕೊಂಡಿದ್ದು, ಇನ್ಮುಂದೆ ರೈಲು ನಿಲ್ದಾಣ ಮತ್ತು ರೈಲಿನಲ್ಲಿ ಟಿಕೆಟ್ ಸಂಗ್ರಹಿಸಬೇಕಾಗಿಲ್ಲ. ನಿನಗಾಗಿ ವಿಶೇಷ ಉದ್ಯೋಗವೊಂದನ್ನು ಕಾಯ್ದಿರಿಸಿದ್ದೇನೆ. ಆದರೆ, ಆ ಪೋಸ್ಟ್ ಯಾವುದು ಎಂದು ಹೇಳುವುದಿಲ್ಲ. ಸದ್ಯ ಅದು ರಹಸ್ಯವಾಗಿಯೇ ಇರಲಿದೆ. ಭಾರತಕ್ಕೆ ಬಂದಾಗ ಏನೆಂದು ತಿಳಿಯಲಿದೆ ಎಂದು ಬೈರೆನ್ ಸಿಂಗ್ ಹೇಳಿದ್ದಾರೆ.
26 ವರ್ಷದ ಮೀರಾಬಾಯಿ 49ಕೆಜಿ ಭಾರ ಎತ್ತುವ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಭಾರ ಎತ್ತಿದರು. 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕರ್ಣಮ್ ಮಲ್ಲೇಶ್ವರಿ ಅವರು ಕಂಚಿನ ಪದಕವನ್ನು ಬೇಟೆಯಾಡಿದ್ದರು. ಅಂದಿನಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕವು ಮರೀಚಿಕೆ ಆಗಿತ್ತು. ಆದರೆ, ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೊದಲ ದಿನವೇ ಪದಕ ಗೆಲ್ಲುವ ಮೂಲಕ ಮೀರಾಬಾಯಿ ಮಹತ್ತರ ಸಾಧನೆ ಮಾಡಿದ್ದಾರೆ. ಅಲ್ಲದೆ, ಇದುವರೆಗೂ ಭಾರತ ಒಲಿಂಪಿಕ್ಸ್ನ ಮೊದಲ ದಿನವೇ ಪದಕ ಬೇಟೆ ಆಡಿರಲಿಲ್ಲ. ಆದರೆ, ಮೀರಾಬಾಯಿ ಆ ಕೊರಗನ್ನು ನೀಗಿಸಿದ್ದಾರೆ.
ಇನ್ನು ಚೀನಾದ ಹೌ ಜಿಹಿ ಒಟ್ಟು 210 ಕೆಜಿ (94ಕೆಜಿ + 116ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಇಂಡೋನೇಷ್ಯಾದ ಕ್ಯಾಂಟಿಕಾ ಐಶಾ 194 ಕೆಜಿ (84ಕೆಜಿ + 110ಕೆಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿದರು. ಮೀರಾಬಾಯಿ ಚಾನು ಅವರು ತಮ್ಮ ಗೆಲುವನ್ನು ದೇಶಕ್ಕೆ ಅರ್ಪಿಸಿದ್ದಾರೆ. (ಏಜೆನ್ಸೀಸ್)
ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!
ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?
‘ಪದಕ ಗೆಲ್ಲುವ ನನ್ನ ಕನಸು ನನಸಾಗಿದೆ’, ಅದನ್ನು ದೇಶಕ್ಕೆ ಅರ್ಪಿಸುತ್ತೇನೆ: ಮೀರಾಬಾಯಿ ಚಾನು