ಉಳ್ಳಾಲ: ಗ್ರಾಮೀಣ ಭಾಗದಲ್ಲೂ ಮೂರು ಸೆಂಟ್ಸ್ ಜಮೀನಿನಲ್ಲೇ ಇಂಗು ಗುಂಡಿ ನಿರ್ಮಿಸಿ ಸರ್ಕಾರದ ಯೋಜನೆಯ ಸದುಪಯೋಗಪಡಿಸಿಕೊಂಡವರು ಒಂದೆಡೆಯಾದರೆ, ಸಾರ್ವಜನಿಕ ಸ್ಥಳಕ್ಕೇ ಶೌಚ ನೀರು ಹರಿಸಿ ದುರ್ವರ್ತನೆ ತೋರುವವರೂ ಇದ್ದಾರೆ. ಇದಕ್ಕೆ ಕುತ್ತಾರ್ನಲ್ಲಿ ಪ್ರತ್ಯಕ್ಷ ನಿದರ್ಶನ ಸಿಗುತ್ತದೆ.
ಮುನ್ನೂರು ಗ್ರಾಮ ಪಂಚಾಯಿತಿ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿರುವ ಕುತ್ತಾರ್ ಜಂಕ್ಷನ್ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಪ್ರದೇಶ. ಮಂಗಳೂರು ವಿಶ್ವವಿದ್ಯಾಲಯ, ಇನ್ಫೋಸಿಸ್ಗೆ ಹೋಗುವ ರಸ್ತೆ, ಆಸುಪಾಸಿನಲ್ಲಿ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳು, ಹಾಸ್ಟೆಲ್, ಆಸ್ಪತ್ರೆಗಳಿವೆ. ಕುತ್ತಾರ್ ಪ್ರವೇಶಿಸುತ್ತಲೇ ಸಿಗುತ ಮದನಿನಗರದ ರಸ್ತೆಬದಿ ಹರಿಯುವ ತ್ಯಾಜ್ಯ ನೀರು ದುರ್ನಾತದೊಂದಿಗೆ ಮಂಗಳೂರು ಕ್ಷೇತ್ರದ ಮಾನ ಹರಾಜು ಹಾಕುತ್ತಿದೆ.
ಪಂಚಾಯಿತಿ ಯೋಜನೆ ಸಿದ್ಧ: ಶೌಚ ನೀರು ರಸ್ತೆಯಲ್ಲಿ ಹರಿಯುತ್ತಿರುವ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಹಿಂದೆ ರಸ್ತೆಬದಿ ಗಿಡ, ಪೊದೆಗಳು ಬೆಳೆದ ಕಾರಣ ಸಾರ್ವಜನಿಕವಾಗಿ ಕಾಣುತ್ತಿರಲಿಲ್ಲ. ಪ್ರಸ್ತುತ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಬದಿ ಅಗೆದ ಹಿನ್ನೆಲೆಯಲ್ಲಿ ಶೌಚ ನೀರು ಕಾಣುತ್ತದೆ. ಇದನ್ನು ಪಂಚಾಯಿತಿ ಆಡಳಿತ ಮತ್ತು ಅಧಿಕಾರಿ ವರ್ಗ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಇಂಗು ಗುಂಡಿ ನಿರ್ಮಿಸಲು ಸೂಚನೆ ನೀಡಿದೆ. ಅಲ್ಲದೆ ಪಂಚಾಯಿತಿಯಿಂದಲೇ ಸಾಮೂಹಿಕ ಇಂಗು ಗುಂಡಿ ನಿರ್ಮಾಣಕ್ಕೂ ಮುಂದಾಗಿದೆ. ಅದಕ್ಕೂ ಮುನ್ನ ಜನರಿಗೆ ಅರಿವು ಮೂಡಿಸಲೂ ಪಂಚಾಯಿತಿ ಯೋಚಿಸಿದೆ. ಇದೆಲ್ಲವೂ ಮಳೆಗಾಲ ಆರಂಭಕ್ಕೆ ಮೊದಲೇ ಜಾರಿಗೆ ಬರುವ ನಿರೀಕ್ಷೆ ಹೊಂದಲಾಗಿದೆ.
ಶೌಚಗೃಹದ ನೀರು ರಸ್ತೆಗೆ ಬಿಡುತ್ತಿರುವ ಮನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ, ನಾಲ್ಕೈದು ಮನೆಯವರು ಇಂಗು ಗುಂಡಿ ಮಾಡಿದ್ದು, ಕೆಲವು ಅರ್ಜಿಗಳು ಬಂದಿವೆ. ಜತೆಗೆ ಸಾಮೂಹಿಕ ಇಂಗು ಗುಂಡಿ ನಿರ್ಮಿಸುವ ಯೋಜನೆಯೂ ಇದೆ.
ರವೀಂದ್ರ ರಾಜೀವ ನಾಯ್ಕ, ಮುನ್ನೂರು ಪಿಡಿಒ
ಶೌಚ ನೀರು ರಸ್ತೆಬದಿ ಹರಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಪ್ರತಿ ಮನೆಗೂ ಇಂಗುಗುಂಡಿ ನಿರ್ಮಿಸುವ ಯೋಚನೆ ಇದೆ. ಈ ಬಗ್ಗೆ ಗ್ರಾಮಸ್ಥರಿಗೂ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಯೋಜಿಸಲಾಗಿದೆ.
ವಿಲ್ಫ್ರೆಡ್ ಡಿಸೋಜ, ಅಧ್ಯಕ್ಷ, ಮುನ್ನೂರು ಗ್ರಾಪಂ