ಆನೇಕಲ್: ಟಿಪ್ಪರ್ ಮೂಲಕ ರೈಲ್ವೆ ಹಳಿ ಕ್ರಾಸಿಂಗ್ ಮಾಡಲು ಹೋಗಿ ಭೀಕರ ಅಪಘಾತ ಸಂಭವಿಸಿ, ಲಾರಿಯ ಬಾಡಿ ಚಾಸಿಸ್ನಿಂದಲೇ ಕಿತ್ತುಹೋಗಿದ್ದಷ್ಟೇ ಅಲ್ಲದೆ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬೆಂಗಳೂರು ಗ್ರಾಮಾಂತರದ ಆನೇಕಲ್ ಸಮೀಪದ ಹುಸ್ಕೂರಿನ ಆವಲಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು, ಖಾಸಗಿ ಟಿಪ್ಪರ್ವೊಂದಕ್ಕೆ ಮೈಸೂರಿನಿಂದ ತಮಿಳುನಾಡಿನ ಪುದುಕೋಟೈಗೆ ಹೋಗುತ್ತಿದ್ದ ಎಕ್ಸ್ಪ್ರೆಸ್ ರೈಲು ಅಪ್ಪಳಿಸಿದೆ.
ಅಪಘಾತದ ತೀವ್ರತೆ ಯಾವ ಪರಿಯಾಗಿತ್ತೆಂದರೆ ಟಿಪ್ಪರ್ ಲಾರಿಯ ಟಯರ್ಗಳು ರೈಲಿನ ಇಂಜಿನ್ ಒಳಗೆ ಸೇರಿಕೊಂಡಿವೆ. ಮಾತ್ರವಲ್ಲ ಲಾರಿಗೆ ಗುದ್ದಿದ ರೈಲು ಲಾರಿಯನ್ನು ಸುಮಾರು ಅರ್ಧ ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿ ನಿಂತಿದೆ. ತಕ್ಷಣದ ಮಾಹಿತಿ ಪ್ರಕಾರ ಈ ರೈಲಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತನ್ನ ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿದ್ದ ಚಾಲಕ, ಅಪಘಾತ ಸಂಭವಿಸಿದ ತಕ್ಷಣ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸುಮಾರು ಅರ್ಧ ಗಂಟೆಯಿಂದ ರೈಲು ಹಳಿಯಲ್ಲೇ ನಿಂತಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ರೈಲ್ವೆ ಹಾಗೂ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ರೈಲಿಗೇ ಡಿಕ್ಕಿ ಹೊಡೆದ ಟಿಪ್ಪರ್; ಚಾಸಿಸ್ನಿಂದಲೇ ಕಿತ್ತುಹೋಯ್ತು ಬಾಡಿ!