More

    ಮಾಜಿ ಸಚಿವ ಖಾದರ್‌ಗೆ ಕೊಲೆ ಬೆದರಿಕೆ

    ಮಂಗಳೂರು: ‘ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್. ಬೇಕಾದ್ರೆ ತಲೆ ಕಡಿಯುವೆವು’ ಎಂದು ಮಾಜಿ ಸಚಿವ ಯು.ಟಿ ಖಾದರ್‌ಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಮಂಗಳೂರು ಸಿಎಎ ಪರ ಸಮಾವೇಶ ಸಂದರ್ಭದ ವಿಡಿಯೋ ಇದೆಂದು ಹೇಳಲಾಗಿದ್ದು, ಮಲಯಾಳ ಭಾಷೆಯಲ್ಲಿದೆ. ರಸ್ತೆ ಬದಿ ನಿಂತಿರುವ ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪು, ಖಾದರ್‌ರನ್ನು ನಿಂದಿಸಿ ಚಪ್ಪಾಳೆ ತಟ್ಟುತ್ತಾ ಘೋಷಣೆ ಕೂಗಿ ನೃತ್ಯ ಮಾಡಿದೆ. ವಿಡಿಯೋದ ಆರಂಭದಲ್ಲಿ ‘ಜೈ ಜೈ ಬಿಜೆಪಿ’ ಎಂಬ ಘೋಷಣೆ ಇದ್ದು, ಬಿಜೆಪಿ ಕಾರ್ಯಕರ್ತರು ಎಂದು ಶಂಕಿಸಲಾಗಿದೆ.

    ಇದಕ್ಕೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಖಾದರ್, ನನ್ನ ಒಬ್ಬನ ತಲೆ ತೆಗೆದರೆ ಹೋರಾಟ ತಣ್ಣಗಾಗದು. ನನ್ನ ತಲೆಯಿಂದ ಸಂತೋಷವಾಗುವುದಾದರೆ ನೀವು ಕರೆಯುವಲ್ಲಿಗೆ ಬರುತ್ತೇನೆ. ಅವರ ವಿರುದ್ಧ ಕೇಸ್ ಹಾಕಬಹುದು. ಆದರೆ ಅವರ ವಯಸ್ಸಾದ ತಾಯಿಯನ್ನು ನೋಡುವವರು ಯಾರು? ಜಾಮೀನಿಗೆ ಮನೆಯಲ್ಲಿ ವಕೀಲರಿಗೆ ಕೊಡುವುದಕ್ಕೂ ಹಣ ಇರುವುದಿಲ್ಲ. ಯುವಕರು ಘೋಷಣೆ ಕೂಗುವಾಗ ಆಲೋಚನೆ ಮಾಡಿ. ಅವರು ನನ್ನ ಕ್ಷೇತ್ರದವರಲ್ಲ, ನಮ್ಮ ಜಿಲ್ಲೆಯವರು ಈ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.
     
    ಹಾಜಬ್ಬರನ್ನು ಕ್ಯೂನಲ್ಲಿ ನಿಲ್ಲಿಸುತ್ತೀರಾ?: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿದ್ದು ಅಭಿನಂದನಾರ್ಹ. ಆದರೆ ಪೌರತ್ವ ಕಾನೂನು ಜಾರಿಗೊಳಿಸುವಾಗ ಹರೇಕಳ ಹಾಜಬ್ಬರ ಬಳಿ ದಾಖಲೆ ಇಲ್ಲದಿದ್ದರೆ ಅವರನ್ನೂ ಕ್ಯೂನಲ್ಲಿ ನಿಲ್ಲಿಸುತ್ತೀರಾ? ಹರೇಕಳ ಹಾಜಬ್ಬ ಅನಕ್ಷರಸ್ಥರು. ಅವರ ಬಳಿ ಎನ್‌ಆರ್‌ಸಿ ದಾಖಲೆ ಕೇಳಿದರೆ ಎಲ್ಲಿಂದ ಕೊಡುತ್ತಾರೆ ಎಂದು ಖಾದರ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳೂರಿಗೆ ಬಂದು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ, ಭಯಪಡಬೇಡಿ ಎಂದಿದ್ದಾರೆ. ಆದರೆ ಜನತೆ ಭಯಪಡುವ ಪರಿಸ್ಥಿತಿ ಏಕೆ ಉದ್ಭವವಾಯಿತು ಎನ್ನುವುದಕ್ಕೆ ಅವರು ಉತ್ತರ ನೀಡಬೇಕು. ಸಮಾವೇಶದಲ್ಲಿ ಯಾರೂ ರಾಷ್ಟ್ರಧ್ವಜ ಹಿಡಿದಿಲ್ಲ, ಕೇವಲ ಬಾಯಲ್ಲಿ ಮಾತ್ರ ದೇಶಪ್ರೇಮವೇ ಎಂದೂ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts