ನವದೆಹಲಿ: ಲಡಾಖ್ನ ಪೂರ್ವ ಭಾಗದಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಿಖರವಾಗಿ ಏನಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾತ್ರಿಯಲ್ಲಿ ಸೇನಾಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಮಾತಿನ ಚಕಮಕಿ ಕಲ್ಲುತೂರಾಟ, ತಳ್ಳಾಟ, ನೂಕಾಟ, ಕಬ್ಬಿಣದ ರಾಡ್ನಲ್ಲಿ ಹೊಡೆದಾಟಕ್ಕೆ ನಾಂದಿ ಹಾಡಿತು.
ತಳ್ಳಾಟ, ನೂಕಾಟದಲ್ಲಿ ಭಾರತದ ಕರ್ನಲ್ ಮತ್ತು ಇಬ್ಬರು ಯೋಧರು ಆಕಸ್ಮಿಕವಾಗಿ ನದಿಗೆ ಬಿದ್ದರು. ಆ ಸಂದರ್ಭದಲ್ಲಿ ತುಂಬಾ ಚಳಿ ಇದ್ದ ಪರಿಣಾಮ ದೇಹ ಮರಗಟ್ಟಿ ರಕ್ಷಿಸುವ ಮೊದಲೇ ಆ ಮೂವರು ಹುತಾತ್ಮರಾದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಚೀನಿ ದಾಳಿಯಲ್ಲಿ ಭಾರತದ ಸೇನಾಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮ
ಚೀನಾದ ಪಾಳೆಯದಲ್ಲಿ ಕೂಡ ಸಾಕಷ್ಟು ಸಾವು ನೋವಾಗಿದೆ ಎನ್ನಲಾಗಿದೆ. ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ನ ಸಂಪಾದಕಿಯ ಪ್ರಕಾರ ಈ ಗಲಾಟೆಯಲ್ಲಿ ಚೀನಾದ ಐವರು ಯೋಧರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಆದರೆ ಚೀನಾ ಸರ್ಕಾರ ಇದನ್ನು ಖಚಿತಪಡಿಸಿಲ್ಲ.
ಮತ್ತೊಂದು ಮೂಲದ ಪ್ರಕಾರ ಚೀನಾದ ಪಾಳೆಯದಲ್ಲಿ ನಾಲ್ವರು ಯೋಧರು ಸತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಕನಿಷ್ಠ ಇನ್ನಿಬ್ಬರಾದರೂ ಸಾಯುವ ಸಾಧ್ಯತೆ ಇದೆ.