ಮೈಸೂರು: ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಹಳೆ ಮೇಲೆ ಮರದ ದಿಮ್ಮಿ, ಕಬ್ಬಿಣ ಇಟ್ಟು ರೈಲು ಅಪಘಾತಕ್ಕೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ರೈಲ್ವೆ ಸಂರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (GRP) ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಒಡಿಶಾದ ಮಯೂರ್ಬಂಜ್ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ತಿಳಿದು ಬಂದಿದೆ. ಲೋಕೋಪೈಲಟ್ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಕಿಡಿಗೇಡಿಗಳು, ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಅವರನ್ನು ನೋಡಿದರೆ ನನಗೆ ಸಲ್ಮಾನ್ ಖಾನ್ ನೆನಪಾಗುತ್ತಾರೆ: ಪ್ರಿಯಾಂಕ ಗಾಂಧಿ
ವಿಚಾರಣೆ ವೇಳೆ ತಮಾಷೆಗಾಗಿ ಹೀಗೆ ಮಾಡಿದ್ದೇವೆ ಎಂದು ಕಿಡಿಗೇಡಿಗಳು ತಿಳಿಸಿದ್ದಾರೆ. ಮೂವರು ಆರೋಪಿಗಳು ಅಪಘಾತದ ಸಂಚು ರೂಪಿಸಿ ಕೆಲ ಕಾಲ ರೈಲ್ವೆ ಹಳಿ ಬಳಿಯೇ ಇದ್ದರು. ಮದ್ಯ ಸೇವಿಸಿ ಹಲವು ತಾಸು ರೈಲ್ವೆ ಹಳಿ ಬಳಿಯೇ ಕಾಯುತ್ತಿದ್ದರು. ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟಿರುವುದು ಗಮನಿಸಿದ ಲೋಕೋಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಲೋಕೋಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನ.13, 2023 ರಂದು ರೈಲ್ವೆ ಕಾಯಿದೆ-1989 ರ ಅನ್ವಯ ಅಡಿ.ಓo.39/2023 U/s 150(1)(0) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯು ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.