ಕನಕಪುರ: ಕೃಷಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧಿಸಿದವರ ಮೇಲೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಬೆದರಿಕೆ ಹಾಕುತ್ತಿದ್ದು, ಘಟಕದ ಕಾಮಗಾರಿ ನಿಲ್ಲಿಸದಿದ್ದರೆ ಕಂದಾಯ ಸಚಿವರ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಸಾತನೂರು ಹೋಬಳಿ ಸೂರನಹಳ್ಳಿ ಸರ್ವೆ ನಂ.17ರಲ್ಲಿ ಗೋಮಾಳವಿದೆ. ಬಾಪೂಜಿ ಕಾಲನಿಗೆ ಹೊಂದಿಕೊಂಡಂತೆ ಕೃಷಿ ಜಮೀನಿನಲ್ಲಿ ಕೆಲವರು ತ್ಯಾಜ್ಯ ಘಟಕ ನಿರ್ವಣಕ್ಕೆ ಮುಂದಾಗಿದ್ದು, ಮಂಗಳವಾರ ಸ್ಥಳಕ್ಕೆ ತೆರಳಿದ ರೈತರು ಕಾಮಗಾರಿ ನಿಲ್ಲಿಸುವಂತೆ ಧರಣಿ ನಡೆಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ಕೃಷಿ ಅವಲಂಬಿಸಿವೆ. ಈಗಾಗಲೇ ಕೆಲ ರೈತರ ಜಮೀನುಗಳು ಒತ್ತುವರಿಯಾಗಿವೆ. ಈ ಬಗ್ಗೆ ಶಿವರತ್ನಮ್ಮ ಎಂಬುವವರು ಸೇರಿ ಮೂವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಕಾಮಗಾರಿ ಮುಂದುವರಿಸಿದ್ದಾರೆ ಎಂದು ದೂರಿದರು.
ಘಟಕ ಸ್ಥಾಪನೆಗೆ ವಿರೋಧವಿದ್ದರೂ ಸಂಸದರ ಬೆಂಬಲವಿದೆ ಎಂದು ಕಾಂಗ್ರೆಸ್ ಮುಖಂಡರಾದ ಶಂಕರ್ ಮತ್ತು ಧನಂಜಯ ಎಂಬುವವರು ನಿರ್ವಣಕ್ಕೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿಲ್ಲ. ಹಾಗೂ ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ತಿರುಗಿ ನೋಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಜಾಗದ ಸಮೀಪ ಹಲವು ಕೆರೆಗಳಿದ್ದು, ರೈತರು ಭತ್ತ, ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಇಲ್ಲಿ ಘಟಕ ಸ್ಥಾಪಿಸಿದರೆ, ಸಮೀಪದ ಗ್ರಾಮಗಳಾದ ಕಬ್ಬಾಳು, ವೆಂಕಟರಾಯನದೊಡ್ಡಿ, ಕಂಸಾಗರ, ಬಾಪೂಜಿ ಕಾಲನಿ, ಮಟ್ಟೆದೊಡ್ಡಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಮಗಾರಿ ಆರಂಭವಾದಾಗಿನಿಂದಲೂ ಈ ಸ್ಥಳದಲ್ಲಿ ಗುಡ್ಡಗಳನ್ನು ಸಿಡಿಸಿ ಕಲ್ಲು ಮತ್ತು ಮಣ್ಣು ಮಾರಾಟ ಮಾಡುತ್ತಿದ್ದಾರೆ. ಸಿಡಿಮದ್ದು ಬಳಕೆಯಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ರೈತರು ದೂರಿದರು.
ಗ್ರಾಮಸ್ಥರಾದ ಗೌರಮ್ಮ, ಭಾಗ್ಯಶಿವಶಂಕರ್, ಶಿವಮ್ಮಬೋರೇಗೌಡ, ಭಾಗ್ಯಮ್ಮತಮ್ಮಯ್ಯ, ಬಸವೇಗೌಡ, ಸೋಮಶೇಖರ್, ಮಾದೇಶ್, ಪ್ರಭು, ಪ್ರಶಾಂತ್, ಗ್ರಾ.ಪಂ. ಮಾಜಿ ಸದಸ್ಯ ಸಿದ್ದರಾಜು, ಮಲ್ಲೇಶ್, ಮಲ್ಲಿಕಾರ್ಜುನ್ ಹಾಗೂ ಇತರರು ಇದ್ದರು.