ಕಡೂರು: ಪಟ್ಟಣದಲ್ಲಿ ಭಾನುವಾರ ಗಾಂಜಾ ಮತ್ತಿನಲ್ಲಿ ನಾಡಪಿಸ್ತೂಲ್ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ಬೀರೂರಿನ ಸಮೀರ್ ಎಂಬುವನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಎಪಿಎಂಸಿ ಆವರಣದ ಗೋದಾಮು ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯ ನಿವಾಸಿ ಸಮೀರ್ನನ್ನು ಖಚಿತ ಮಾಹಿತಿ ಮೇರೆಗೆ ಕಡೂರು ಪಿಎಸ್ಐ ಧನಂಜಯ್ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಾರಾಷ್ಟ್ರ ಮೂಲದ ಮಯೂರ್ ಮತ್ತು ರಾಹುಲ್ ಎಂಬುವರಿಂದ ಗನ್ ಖರೀದಿಸಿದ್ದಾಗಿ ಆರೋಪಿ ಸಮೀರ್ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಮೆಟಲ್ ಮತ್ತು ಬ್ರೌನ್ ಕಲರ್ ಪ್ಲಾಸ್ಟಿಕ್ ಬಾಡಿ ಹೊಂದಿರುವ ನಾಡಪಿಸ್ತೂಲ್, ಎಂಟು ಜೀವಂತ ಗುಂಡುಗಳು, ಫೋಲ್ಡಿಂಗ್ ಚಾಕು, ಎಸ್ಬಿಬಿಎಲ್ ಬಂದೂಕು, ಕಬ್ಬಿಣದ ತಲವಾರ್, ಏರ್ಗನ್, 52 ಗ್ರಾಂ ಗಾಂಜಾ, ಮಹೀಂದ್ರ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ವಿಚಾರಣೆ ಮುಂದುವರಿಸಿದ ಪೊಲೀಸರು ಬೀರೂರಿನ ಮನೆಯಲ್ಲಿಟ್ಟಿದ್ದ ಎಸ್ಬಿಬಿಎಲ್ ಬಂದೂಕಿಗೆ ಬಳಸುವ 6 ಜೀವಂತ ಗುಂಡುಗಳು, ಪಿಸ್ತೂಲ್ನಿಂದ ಫೈರಿಂಗ್ ಆಗಿರುವ 3 ಎಂಪಿಟಿ ಗುಂಡುಗಳು, 400 ಗ್ರಾಂ ಗನ್ ಪೌಡರ್, ಪ್ಯಾಕೇಟ್ ಐರನ್ ಬಾಲ್ಸ್, ತೂಕದ ಮಷಿನ್, ಸ್ಟೀಲ್ ರಾಡ್, ಶಿಕಾರಿಗಾಗಿ ಬಳಸುವ ಸ್ಟೀಲ್ ಕತ್ತಿ, ಫೋಲ್ಡಿಂಗ್ ಚಾಕುಗಳು, ಹೆಡ್ಟಾರ್ಚ್, ಮಾಸ್ಕ್, ಮಾರುತಿ ಆಲ್ಟೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆಯೂ ಅಜ್ಜಂಪುರ ಠಾಣೆಯಲ್ಲಿ ಗಾಂಜಾ ಕೇಸ್ ದಾಖಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ಗನ್ಗಳ ಪೂರೈಕೆ ಮಾಡುತ್ತಿದ್ದ ತಂಡಗಳ ಬಗ್ಗೆ ಹಾಗೂ ಪೂರಕ ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ಎರಡು ತಂಡಗಳನ್ನು ರಚಿಸಿಲಾಗಿದೆ. ಮುಂದಿನ ದಿನಗಳಲ್ಲಿ ಆರೋಪಿ ಜತೆಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಡಾ. ವಿಕ್ರಮ ಅಮಟೆ ವಿಜಯವಾಣಿಗೆ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಪವನ್ಕುಮಾರ್, ನವೀನ್, ಶೋಭಾ, ಕಿರಣ್, ಸಿಬ್ಬಂದಿ ಇದ್ದರು.