ನಾಯ್ಡಾ : ಉತ್ತರ ಪ್ರದೇಶದ ನಾಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ಸುಹಾಸ್ ಎಲ್.ವೈ. ಅವರು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ-ಬ್ಯಾಂಡ್ಮಿಂಟನ್ ಆಟಗಾರರೂ ಆಗಿದ್ದಾರೆ. ತಮ್ಮ ಆಟದ ಕೌಶಲ್ಯದಿಂದಾಗಿ ಮುಂದಿನ ತಿಂಗಳು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ.
ಐಎಎಸ್ ಅಧಿಕಾರಿಯೊಬ್ಬರು ಪ್ಯಾರಾಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಇದು ಮೊದಲನೇ ಬಾರಿ. 2007 ರ ಬ್ಯಾಚ್ನ ಐಎಎಸ್ ಅಧಿಕಾರಿಯಾದ ಸುಹಾಸ್ ಪ್ರಯಾಗ್ರಾಜ್ ಸೇರಿದಂತೆ ಯುಪಿಯ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಒಂದು ವರ್ಷದಿಂದ ನಾಯ್ಡಾದ ಡಿಎಂ ಆಗಿ ಜಿಲ್ಲೆಯ ಕೋವಿಡ್ ವಿರುದ್ಧದ ಸಮರದ ನೇತೃತ್ವ ವಹಿಸಿದ್ದಾರೆ.
ಇದನ್ನೂ ಓದಿ: ಒಲಂಪಿಕ್ಸ್ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ
2019-20 ರಲ್ಲಿ ಅವರು ಭಾಗವಹಿಸಿದ ಪಂದ್ಯಾವಳಿಗಳಲ್ಲಿ ಮೂರು ಚಿನ್ನ, 2 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಮೆನ್ಸ್ ಸಿಂಗಲ್ಸ್ನಲ್ಲಿ ಮೂರನೇ ರಾಂಕ್ ಗಳಿಸಿದ ಅವರ ಸಾಧನೆಯ ಆಧಾರದ ಮೇಲೆ ಅವರನ್ನು ಪ್ಯಾರಾಲಿಂಪಿಕ್ಸ್ಗೆ ಆಯ್ಕೆ ಮಾಡಲಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನ ಆಹ್ವಾನದ ಮೇರೆಗೆ, ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾಕೂಟದ ನಂತರ ನಡೆಯಲಿರುವ, ವಿಶೇಷ ಚೇತನರ ಕ್ರೀಡಾಕೂಟವಾದ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
“ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವುದು ನನ್ನ ಕನಸು ನನಸಾದ ಹಾಗಿದೆ” ಎಂದು ಹೇಳಿರುವ ಸುಹಾಸ್, ತಮ್ಮ ಕರ್ತವ್ಯದ ಜೊತೆಯಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿತ್ಯ ಅಭ್ಯಾಸದಲ್ಲಿ ತೊಡಗಿದ್ದಾರಂತೆ. ಒಂದು ವಾರದಷ್ಟು ಕಾಲ ಮಾತ್ರ ಪ್ಯಾರಾಲಿಂಪಿಕ್ಸ್ಗಾಗಿ ತೆರಳಲಿದ್ದು, ಅದು ತಮ್ಮ ಆಡಳಿತಾತ್ಮಕ ಕರ್ತವ್ಯಗಳಿಗೆ ಹೆಚ್ಚು ಅಡ್ಡಿ ಉಂಟುಮಾಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)