ನೆಲಮಂಗಲ: ಮನೆಗಳವು, ಸರಗಳವು ಪ್ರಕರಣಗಳಲ್ಲಿ ಸಕ್ರಿಯರಾಗಿದ್ದ ಕಳ್ಳರ ಕಣ್ಣು ಇದೀಗ ದೇಗುಲಗಳಲ್ಲಿನ ಹುಂಡಿಗಳ ಮೇಲೆ ಬಿದ್ದಿದೆ. ದೇವರಿಗಾಗಿ ಅರ್ಪಿಸಿದ್ದ ಭಕ್ತರ ಕಾಣಿಕೆ ಚೋರರ ಪಾಲಾಗುತ್ತಿದೆ. ಮನೆಯಿಂದ ಕದಿಯೋದನ್ನ ಬಿಟ್ಟು ಈಗ ಈ ಕಳ್ಳರು ನೇರವಾಗಿ ದೇವರಿಂದಲೇ ಕದಿಯ ತೊಡಗಿದ್ದಾರೆ
ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಒಂದೇ ದಿನ ಎರಡು ದೇಗುಲಗಳಲ್ಲಿ ಹುಂಡಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಹುಂಡಿಗೆ ಕನ್ನ ಹಾಕಿದ ಕಳ್ಳರು ಜತೆಗೆ ದೇವರ ವಿಗ್ರಹದ ಮೇಲಿನ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಹಾಲಕ್ಷ್ಮಿ, ರಂಗನಾಥ ದೇಗುಲಗಳಿಗೆ ಕನ್ನ:
ನರಸಾಪುರ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಮುಖ್ಯ ದ್ವಾರದ ಬೀಗ ಒಡೆದು ಒಳನುಗ್ಗಿರುವ ಕಳ್ಳರು ದೇವರ ಮೇಲಿದ್ದ 50ಗ್ರಾಂ ತೂಕದ 15ಕ್ಕೂ ಹೆಚ್ಚು ಮಾಂಗಲ್ಯ ಸರ ಮತ್ತು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಅದೇ ದಿನ ಕಳಲುಘಟ್ಟ ಗ್ರಾಮದ ರಂಗನಾಥ ಸ್ವಾಮಿ ದೇವಾಲಯದ ಕಿಟಕಿ ಸರಳು ಮುರಿದು ಒಳ ನುಗ್ಗಿ ಹುಂಡಿ ಬೀಗ ಒಡೆದು ಹಣ ದೋಚಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಹುಂಡಿ ಹಣ ಏಣಿಕೆ ಮಾಡಿರಲಿಲ್ಲ ಎನ್ನಲಾಗಿದ್ದು, ಲಕ್ಷಾಂತರ ರೂ. ದಕ್ಷಿಣೆ ಚೋರರ ಜೇಬು ಸೇರಿದೆ.
2 ವರ್ಷದ ಹಿಂದೆಯೂ ನಡೆದಿತ್ತು:
ಇವೆರಡು ದೇಗುಲಗಳಲ್ಲಿ ಕಳೆದ 2 ವರ್ಷದ ಹಿಂದೆಯೂ ಹುಂಡಿ ಕಳವು ಪ್ರಕರಣ ನಡೆದಿತ್ತು ಎನ್ನಲಾಗಿದೆ. ಆಗಲೂ ಹುಂಡಿಯೊಂದಿಗೆ ದೇವರ ಮೇಲಿದ್ದ ಚಿನ್ನದ ತಾಳಿಗಳನ್ನು ಕಳ್ಳರು ದೋಚಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.