ನವದೆಹಲಿ: ಕಗ್ಗಂಟಾಗುತ್ತಲೇ ಬಂದಿರುವ ರೈತರ ಪ್ರತಿಭಟನೆ ಭಾರತ್ ಬಂದ್ ಆಗುವ ಮಟ್ಟಕ್ಕೆ ಬಂದಿದ್ದು, ಮಂಗಳವಾರ ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಸಜ್ಜಾಗಿವೆ. ಈಗಾಗಲೇ ರೈತ ಪ್ರತಿಭಟನೆಯ ತೀವ್ರತೆಯನ್ನು ಕಂಡಿರುವ ದೇಶದ ಜನತೆ ಬಂದ್ ದಿನದ ಬಗ್ಗೆ ಒಂದಷ್ಟು ಚಿಂತೆಯಲ್ಲಿದ್ದಾರೆ. ಆದರೆ ಅಂದು ಒಂದು ವರ್ಗಕ್ಕೆ ಮಾತ್ರ ರೈತರು ವಿನಾಯಿತಿ ನೀಡಿದ್ದಾರೆ.
ದೇಶದ ಸುಮಾರು 40 ರೈತಸಂಘಟನೆಗಳು ಜತೆಯಾಗಿ ಮಂಗಳವಾರದ ಭಾರತ್ ಬಂದ್ಗೆ ಭಾನುವಾರ ಕರೆ ನೀಡಿದ್ದಾರೆ. ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ರೈತ ಮುಖಂಡರಾದ ಬಲ್ದೇವ್ ಸಿಂಗ್ ನಿಹಾಲ್, ಅಶೋಕ್ ಧಾನ್ವ್ಲೆ, ಯೋಗೇಂದ್ರ ಯಾದವ್ ಮುಂತಾದವರು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಶನಿವಾರದ ಮಾತುಕತೆ ಫಲಪ್ರದವಾಗಿಲ್ಲ. ಅಲ್ಲದೆ ಸರ್ಕಾರ ರೈತರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನಾವು ಭಾರತ್ ಬಂದ್ಗೆ ಕರೆ ನೀಡುತ್ತಿರುವುದಾಗಿ ರೈತ ಮುಖಂಡರು ಹೇಳಿಕೊಂಡಿದ್ದಾರೆ.
ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಚಂಡೀಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಈ ಬಂದ್ಗೆ ಬೆಂಬಲ ಘೋಷಿಸಿವೆ. ಮಂಗಳವಾರ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿದ್ದು, ಸಾರಿಗೆ ಸಂಪರ್ಕಗಳು ಸ್ಥಗಿತಗೊಂಡಿರಲಿವೆ. ಮಧ್ಯಾಹ್ನದ ನಂತರ ಸಾರಿಗೆ ವ್ಯವಸ್ಥೆ ಆರಂಭಗೊಂಡರೂ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿವೆ. ಆದರೆ ಮದುವೆ ಸಮಾರಂಭಗಳಿಗೆ ಭಾರತ್ ಬಂದ್ನಿಂದ ವಿನಾಯಿತಿ ಇರಲಿದೆ, ಅಂದು ನಡೆಯಲಿರುವ ಮದುವೆಗಳಿಗೆ ರೈತರು ಅಡ್ಡಿ ಮಾಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
ಕೋವಿಡ್ ನಿಯಮ ಉಲ್ಲಂಘನೆಗೆ 1 ಲಕ್ಷ ರೂ.ವರೆಗೆ ದಂಡ: ಮಾಲೀಕರು, ಆಯೋಜಕರೇ ಭರಿಸಬೇಕು