ಮೈಸೂರು: ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿರಲಿದ್ದಾರೆ. ಈ ಬಗ್ಗೆ ಈಗಾಗಲೇ ತಯಾರಿ ಆರಂಭಗೊಂಡಿದ್ದು, ವ್ಯವಸ್ಥೆ ಹೇಗಿರಲಿದೆ ಎಂಬ ಕುರಿತು ಮಾಹಿತಿ ಹೊರಬಿದ್ದಿದೆ. ಅಲ್ಲದೆ ಈ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆಯೊಂದು ಬಂದಿದೆ.
ಯೋಗ ದಿನದ ತಯಾರಿ ಕುರಿತು ಇಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿಶೇಷ ವ್ಯವಸ್ಥೆಗಳ ಕುರಿತು ಇವರು ಮಾಹಿತಿ ನೀಡಿದ್ದಾರೆ.
ಅರಮನೆ ಆವರಣದಲ್ಲಿ 15 ಸಾವಿರ ಜನರಿಗೆ ಯೋಗ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 17 ಬ್ಲಾಕ್ಗಳನ್ನು ಮಾಡಲಾಗಿದ್ದು, ಪ್ರತಿಯೊಂದರಲ್ಲೂ 100 ಜನರಿಗೆ ವ್ಯವಸ್ಥೆ ಇರಲಿದೆ, ಅಲ್ಲದೆ 120 ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಯೋಗ ಮಾಡಲು ಮ್ಯಾಟ್, ಶೂ, ಬ್ಯಾಗ್ಸ್ ಎಲ್ಲವನ್ನೂ ಕೇಂದ್ರ ಸರ್ಕಾರವೇ ನೀಡಲಿದೆ. ಆಹ್ವಾನ ಪತ್ರಿಕೆ, ವೇದಿಕೆ ನಿರ್ಮಾಣದ ಜವಾಬ್ದಾರಿ ನಮ್ಮ ಅಧಿಕಾರಿಗಳದ್ದು. ಅರಮನೆ ಆವರಣದಲ್ಲಿ ಯೋಗ ಮಾಡಲು ನೋಂದಣಿ ಮಾಡುವವರು ಕರೋನಾ 2 ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು, ಪಡೆಯದೇ ಇರುವವರು ಯೋಗ ದಿನಕ್ಕೂ 72 ಗಂಟೆ ಮುಂಚಿನ ಕರೋನಾ ನೆಗಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಎಸ್.ಟಿ. ಸೋಮಶೇಖರ್ ತಿಳಿಸಿದರು.
ಜೊತೆಗೆ ಕೇಂದ್ರ ಸರ್ಕಾರ ನೀಡಿರುವ ಮಹತ್ವದ ಸೂಚನೆಯೊಂದರ ಬಗ್ಗೆಯೂ ಅವರು ತಿಳಿಸಿದರು. ಕ್ವಾಲಿಟಿ ಮುಖ್ಯ ಹೊರತು ಕ್ವಾಂಟಿಟಿ ಮುಖ್ಯ ಅಲ್ಲ ಎಂದು ಕೇಂದ್ರದಿಂದ ಸೂಚನೆ ಬಂದಿದೆ. ಕೇಂದ್ರ ಸರ್ಕಾರವೇ ಈ ಇವೆಂಟ್ ಮ್ಯಾನೇಜ್ ಮಾಡುತ್ತಿದೆ ಎಂದು ಹೇಳಿದರು.
ಅಮ್ಮನಾದ ನಟಿ ಪ್ರಣೀತಾ; ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ದೃಶ್ಯ ನೆನಪಿಸಿಕೊಂಡಿದ್ದೇಕೆ?