ಕಾನ್ಪುರ: ಬೇಗನೆ ಡಿಕ್ಲೇರ್ ಮಾಡಿಕೊಂಡು 4ನೇ ದಿನದಂತ್ಯದಲ್ಲೇ ನ್ಯೂಜಿಲೆಂಡ್ ತಂಡದ ಹೆಚ್ಚಿನ ವಿಕೆಟ್ ಕಬಳಿಸಿ ಒತ್ತಡಕ್ಕೆ ಸಿಲುಕಿಸುವ ಅವಕಾಶವಿದ್ದರೂ ಭಾರತ ವಿಳಂಬ ಮಾಡಿತು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಆದರೆ ಪದಾರ್ಪಣೆ ಟೆಸ್ಟ್ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ ಇದನ್ನು ಒಪ್ಪಿಕೊಂಡಿಲ್ಲ ಮತ್ತು ತಡವಾಗಿ ಡಿಕ್ಲೇರ್ ಮಾಡಿಕೊಂಡ ಹಿಂದಿನ ಕಾರಣವನ್ನೂ ವಿವರಿಸಿದ್ದಾರೆ.
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡು 4 ದಿನಗ ಕಳೆದರೂ ಗ್ರೀನ್ ಪಾರ್ಕ್ ಕ್ರೀಡಾಂಗಣದ ಪಿಚ್ ಇನ್ನೂ ಬೌಲರ್ಗಳಿಗೆ ಹೆಚ್ಚು ನೆರವಾಗುತ್ತಿಲ್ಲ. ವಿಕೆಟ್ ಕಬಳಿಸುವುದು ಈಗಲೂ ಕಠಿಣವಾಗಿದೆ. ಹೀಗಾಗಿ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರದಂತೆ ಡಿಕ್ಲೇರ್ ವಿಳಂಬಗೊಳಿಸಲಾಯಿತು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಹೆಚ್ಚು ಕಷ್ಟಕರವಾಗಿಲ್ಲ. ಹೀಗಾಗಿ ನಾವು ಸ್ಪರ್ಧಾತ್ಮಕ ಮೊತ್ತವೊಂದನ್ನು ಕೂಡಿಹಾಕುವುದು ಅಗತ್ಯವಾಗಿತ್ತು. 275-280 ರನ್ಗಳ ಗುರಿ ನೀಡುವುದು ನಮ್ಮ ಯೋಜನೆಯಾಗಿತ್ತು. ಇನ್ನೀಗ ನಾವು ಸ್ಪಿನ್ ಪವರ್ ಬಳಸಬೇಕಾಗಿದೆ. ಸೋಮವಾರ ನಮ್ಮ ಕೆಲಸವನ್ನು ಬೇಗನೆ ಮುಗಿಸುವ ವಿಶ್ವಾಸವಿದೆ. ನಮ್ಮ ಸ್ಪಿನ್ನರ್ಗಳ ಮೇಲೆ ನಂಬಿಕೆ ಇದೆ. ಅವರು ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಬಲ್ಲರು’ ಎಂದು ಶ್ರೇಯಸ್ 4ನೇ ದಿನದಾಟದ ಬಳಿಕ ನುಡಿದರು.
#TeamIndia have declared with a lead of 283 runs on the board.
Scoreboard – https://t.co/9kh8Df6cv9 #INDvNZ @Paytm pic.twitter.com/pO3dv2TXZp
— BCCI (@BCCI) November 28, 2021
ಅಜಿಂಕ್ಯ ರಹಾನೆ ಪಡೆ ಕಿವೀಸ್ ತಂಡಕ್ಕೆ 284 ರನ್ ಗೆಲುವಿನ ಗುರಿ ನೀಡಿದೆ. ಕಡೇ ದಿನದಾಟದಲ್ಲಿ ಭಾರತದ ಗೆಲುವಿಗೆ 9 ವಿಕೆಟ್ ಅವಶ್ಯತೆಯಿದ್ದರೆ, ಪ್ರವಾಸಿ ತಂಡ ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರಷ್ಟೇ ಪ್ರತಿ ಹೋರಾಟ ತೋರುವ ಅವಕಾಶ ಹೊಂದಿದೆ. ಭಾನುವಾರ 1 ವಿಕೆಟ್ಗೆ 14 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡ, ವೇಗಿಗಳಾದ ಟಿಮ್ ಸೌಥಿ (75ಕ್ಕೆ 3) ಹಾಗೂ ಕೈಲ್ ಜೇಮಿಸನ್ (40ಕ್ಕೆ 3) ಮಾರಕ ದಾಳಿಗೆ ನಲುಗಿ ಒಂದು ಹಂತದಲ್ಲಿ 51 ರನ್ಗಳಿಗೆ 5 ವಿಕೆಟ್ ಕೈಚೆಲ್ಲಿತು. ಬಳಿಕ ಮೊದಲ ಇನಿಂಗ್ಸ್ ಶತಕಸಾಧಕ ಶ್ರೇಯಸ್ ಅಯ್ಯರ್ (65ರನ್, 125 ಎಸೆತ, 8 ಬೌಂಡರಿ, 1 ಸಿಕ್ಸರ್), ಆರ್.ಅಶ್ವಿನ್ (32 ರನ್, 62 ಎಸೆತ, 5 ಬೌಂಡರಿ) ಹಾಗೂ ಕುತ್ತಿಗೆ ನೋವಿನ ನಡುವೆಯೂ ಬ್ಯಾಟಿಂಗ್ಗಿಳಿದ ವೃದ್ಧಿಮಾನ್ ಸಾಹ (61*ರನ್, 126 ಎಸೆತ, 4 ಬೌಂಡರಿ, 1 ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ಗೆ 234 ರನ್ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿದ್ದು, ದಿನದಂತ್ಯಕ್ಕೆ 4 ಓವರ್ಗಳಲ್ಲಿ 1 ವಿಕೆಟ್ಗೆ 4 ರನ್ಗಳಿಸಿದೆ. ಕೇನ್ ವಿಲಿಯಮ್ಸನ್ ಪಡೆ ಜಯ ದಾಖಲಿಸಲು ಇನ್ನೂ 280 ರನ್ ಪೇರಿಸಬೇಕಿದೆ.
ನ್ಯೂಜಿಲೆಂಡ್ಗೆ 284 ರನ್ ಗುರಿ ; ಕಾನ್ಪುರದಲ್ಲಿ ಗೆಲುವಿನತ್ತ ಟೀಮ್ ಇಂಡಿಯಾ