ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಅದನ್ನೇ ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆ ಕುಸಿತ ಆಗಿರುವ ಬಗ್ಗೆ ವಿವಿಧ ಉದ್ಯಮಿಗಳೊಂದಿಗೆ, ಆರ್ಥಿಕ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿರುವ ರಾಹುಲ್ ಗಾಂಧಿ, ಇಂದು ಉದ್ಯಮಿ ರಾಜೀವ್ ಬಜಾಜ್ ಅವರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ದೇಶಕ್ಕೆ ಲಾಕ್ಡೌನ್ ಅಗತ್ಯವಿಲ್ಲ. ವಿಶ್ವ ಯುದ್ಧದ ಸಂದರ್ಭದಲ್ಲೂ ಲಾಕ್ಡೌನ್ ಎಂಬುದು ಇರಲಿಲ್ಲ. ಅಂಥದ್ದರಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಿರುವುದು ಎಷ್ಟು ಸರಿ ಎಂದು ಹೇಳಿದರು.
ವಿಶ್ವ ಯುದ್ಧಗಳ ಸಮಯದಲ್ಲೂ ಇಡೀ ಜಗತ್ತಿನಲ್ಲಿ ಲಾಕ್ಡೌನ್ ಇರಲಿಲ್ಲ. ಎಲ್ಲ ರೀತಿಯ ಚಟುವಟಿಕೆಗಳೂ ನಡೆಯುತ್ತಿದ್ದವು ಎಂದು ನಾನು ಭಾವಿಸುತ್ತೇನೆ. ಮಹಾಯುದ್ಧ ಅತಿಯಾದ ಹಾನಿಯನ್ನುಂಟು ಮಾಡಿದ, ವಿನಾಶವನ್ನುಂಟು ಮಾಡಿದ ವಿದ್ಯಮಾನ. ಆ ಕಾಲದಲ್ಲಿಯೇ ಲಾಕ್ಡೌನ್ ಮಾಡಿರಲಿಲ್ಲ.
ಕೊವಿಡ್-19 ವೈರಸ್ ಬರುವುದಕ್ಕೂ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ನಿರುದ್ಯೋಗ ಸಮಸ್ಯೆ ತಲೆ ಎತ್ತಿತ್ತು. ಈಗಂತೂ ಕೊವಿಡ್-19 ಆ ಸಮಸ್ಯೆಗಳನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡುಹೋಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಮಾತಿಗೆ ಪ್ರತಿಕ್ರಿಯೆ ನೀಡಿದ ಉದ್ಯಮಿ ರಾಜೀವ್ ಬಜಾಜ್ ಅವರೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಮಾತ್ರ ಕಠಿಣವಾಗಿ ಲಾಕ್ಡೌನ್ ವಿಧಿಸಲಾಗಿದೆ. ಇಷ್ಟು ಬಿಗಿಯಾದ ಲಾಕ್ಡೌನ್ ಉಳಿದೆಲ್ಲೂ ಇಲ್ಲ. ವಿದೇಶಗಳಲ್ಲಿ ನನ್ನ ಕೆಲವು ಸ್ನೇಹಿತರು, ಕುಟುಂಬದವರು ಇದ್ದಾರೆ. ಅವರಿಗೆಲ್ಲ ಹೊರಗೆ ಓಡಾಡಲು ಅವಕಾಶ ಇದೆ. ಆದರೆ ಭಾರತದಲ್ಲಿ ಜನರಿಗೆ ಮನೆಯಿಂದ ಹೊರಬೀಳಲು ಕೊಡುತ್ತಿಲ್ಲ. ಇಂಥ ಕಠಿಣತೆ ಅಗತ್ಯ ಇರಲಿಲ್ಲ ಎಂದು ರಾಜೀವ್ ಹೇಳಿದ್ದಾರೆ.
ಹಾಗೇ, ಸಂಕಷ್ಟಕ್ಕೀಡಾಗಿರುವ ಆರ್ಥಿಕತೆಯನ್ನು ಮತ್ತೆ ಉತ್ತೇಜನ ಮಾಡಲು ಭಾರತ ಸರ್ಕಾರ ಕೆಲವು ಪ್ರಾವೀಣ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಭಾರತದಲ್ಲಿ ಲಾಕ್ಡೌನ್ನ್ನು ಏಕಾಏಕಿ ಹೇರಲಾಯಿತು. ಶ್ರೀಮಂತರಿಗೆ ಮನೆ ಇದೆ, ಬೇಕಾಗಿದ್ದೆಲ್ಲ ಇದೆ ಹಾಗಾಗಿ ಅವರಿಗೆ ಲಾಕ್ಡೌನ್ ಕಷ್ಟವಾಗೋದಿಲ್ಲ. ಆದರೆ ಬಡವರು, ವಲಸೆ ಕಾರ್ಮಿಕರ ಬದುಕು ಸಂಪೂರ್ಣ ನಾಶವಾಗುತ್ತಿದೆ ಎಂದು ಹೇಳಿದರು.
ಲಾಕ್ಡೌನ್ನಿಂದಾಗಿ ನಾವು ನಮ್ಮ ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಹಲವರು ನನ್ನ ಬಳಿಯೇ ಹೇಳಿಕೊಂಡಿದ್ದಾರೆ. ಇದು ದುಃಖಕರ ಸಂಗತಿ ಮತ್ತು ದೇಶಕ್ಕೆ ಮಾರಕವಾದ ಬೆಳವಣಿಗೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. (ಏಜೆನ್ಸೀಸ್)