ಕುಂದಾಪುರ: ಕುಂಭಾಶಿ ವಿನಾಯಕ ನಗರದಲ್ಲಿ ಆ.5ರಂದು ಕುಟುಂಬ ಸದಸ್ಯರು ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭ ಮನೆಗೆ ಕನ್ನ ಹಾಕಿ ಚಿನ್ನಾಭರಣ, ನಗದು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕುಂಭಾಶಿ ವಿನಾಯಕ ನಗರ ನಿವಾಸಿ ಸುಭಾಶ್ಚಂದ್ರ ಆಚಾರ್ಯ(40)ಆರೋಪಿ. ಆತನಿಂದ 8 ಗ್ರಾಂ ಚಿನ್ನದ ಬ್ರಾಸ್ಲೈಟ್, 12ಗ್ರಾಂ ಪೆಂಡೆಂಟ್ ರೋಪ್ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ, 1610 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕುಂಭಾಶಿ ವಿನಾಯಕ ನಗರ ನಿವಾಸಿ ಮಂಜುನಾಥ ಜೋಗಿ ಎಂಬುವರು ಜುಲೈ 29ರಂದು ಕುಟುಂಬ ಸಮೇತರಾಗಿ ಫಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದು ಆ.5 ರಂದು ವಾಪಸ್ಸಾದಾಗ ಮನೆಯಿಂದ ಚಿನ್ನಾಭರಣ ಕಳವಾದ ಘಟನೆ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿ ಹಾಗೂ ಅಡುಗೆ ಮನೆಯ ಬಾಗಿಲನ್ನು ಒಡೆದು ಕಪಾಟಿನಲ್ಲಿರಿಸಿದ್ದ 1.20 ಲಕ್ಷ ರೂ ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣಗಳು ಮತ್ತು 13,500 ರೂ. ನಗದು ಹಣ ಕಳವು ಮಾಡಲಾಗಿತ್ತು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ. ಹಾಗೂ ಕಾನೂನು ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್. ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆದಳ ತಂಡದ ಸಿಬ್ಬಂದಿ ಸಂತೋಷ ಕುಮಾರ್ ಕೆ.ಯು, ಸಂತೋಷ ಕುಮಾರ್, ರಾಘವೇಂದ್ರ ಬೈಂದೂರು, ಅವಿನಾಶ್, ರಾಮ ಪೂಜಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಾಕ್ಸ್
ಪಕ್ಕದ ಮನೆಯಾತನ ಚಪ್ಪಲಿ ಇಟ್ಟಿದ್ದ
ಸುಭಾಶ್ಚಂದ್ರ ಆಚಾರ್ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ಈ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಕಳವು ಕೃತ್ಯದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಆರೋಪಿ ಬ್ಯಾಂಕ್ ಖಾತೆಗೆ 20 ಸಾವಿರ ಹಣ ವರ್ಗಾವಣೆ ಕೂಡ ಆಗಿತ್ತು. ಕಳವು ನಡೆಸಿದ ಮನೆಯಲ್ಲಿ ಪಕ್ಕದ ಮನೆಯ ಯುವಕನ ಚಪ್ಪಲಿಯಿಟ್ಟು ಅವರ ಮೇಲೆ ಸಂಶಯ ಬರುವಂತೆ ಸಂಚು ಮಾಡಿದ್ದ. ತನಿಖೆ ಕೈಗೊಂಡ ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡುವಂತೆ ಮಾಡಿದ್ದ