ನವದೆಹಲಿ: ನಿಷ್ಠೆ ಎಂದರೆ ಹೀಗಿರಬೇಕಪ್ಪಾ. ಗ್ಯಾಂಗ್ ಲೀಡರ್ನ ಕ್ಯಾನ್ಸರ್ ಚಿಕಿತ್ಸೆಗಾಗಿ ಇವರಲ್ಲಿಹಣ ಇಲ್ಲಾ ಎಂದು ಕಾರು ಕಳ್ಳತನಕ್ಕೆ ಇಳಿದಿದ್ದಾರೆ. ಚಿಕಿತ್ಸೆಗಾಗಿ ಹಣ ಪಾವತಿಸಲು ಇವರು ಕಾರುಗಳನ್ನು ಕದ್ದು, ಅವರ ಗೋಡೌನ್ನಲ್ಲಿ ಅವುಗಳ ಭಾಗಗಳನ್ನು ಕಿತ್ತುಹಾಕಿ ನಗರದ ಸ್ಕ್ರ್ಯಾಪ್ ಡೀಲರ್ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಈ ನಾಲ್ವರು ನಿಷ್ಠರನ್ನು ಬಂಧಿಸಿದ್ದಾರೆ.
ಸೋಮವಾರ ಬಂಧಿತರನ್ನು ಲಕ್ಕಿ(36), ಸಫೀಕ್(21), ಮಜಿಮ್ ಅಲಿ(25), ಮತ್ತು ರಾಮ್ ಸಂಜೀವನ್(62) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳು ದೆಹಲಿಯ ಹೊರಭಾಗದಲ್ಲಿ ತಮ್ಮ ಗೋಡೌನ್ ಅನ್ನು ಹೊಂದಿದ್ದು ಇವರು ನಗರದಲ್ಲಿ 20ಕ್ಕೂ ಹೆಚ್ಚು ಅತ್ಯಾಧುನಿಕ ಕಾರುಗಳನ್ನು ಕದ್ದು ಬಿಡಿಭಾಗಗಳನ್ನು ಮಾರಾಟ ಮಾಡಿದ್ದಾರೆ.
ಲಕ್ಕಿಯ ಸೋದರಸಂಬಂಧಿ ಆಶಿಶ್ ಅಲಿಯಾಸ್ ಅಶು ಈ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಆಗಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ತೀವ್ರವಾದ ಲ್ಯುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಲಕ್ಕಿಯ ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಹಣ ನೀಡಬೇಕೆಂದು ಪೊಲೀಸರಿಗೆ ತಿಳಿಸಿದ್ದಾರೆ. “ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ಅವರ ಗ್ಯಾಂಗ್ ಲೀಡರ್ಗೆ ಕೀಮೋಥೆರಪಿ ಮತ್ತು ರಕ್ತದ ಮಜ್ಜೆಯ ಕಸಿ ಮಾಡಲು 10 ಲಕ್ಷ ರೂ. ಬೇಕಾಗಿತ್ತು. ಗ್ಯಾಂಗ್ ಲೀಡರ್ ಆಶಿಶ್, ಅವರಿಗೆ ಕಾರುಗಳನ್ನು ಕದಿಯುವುದು ಹೇಗೆಂದು ಕಲಿಸಿದರು ಎಂದು ಅವರು ಬಹಿರಂಗಪಡಿಸಿದ್ದಾರೆ, ”ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜನವರಿ 8 ರಂದು ದಕ್ಷಿಣ ದೆಹಲಿಯ ಆನಂದ್ ನಿಕೇತನದಿಂದ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಕಳ್ಳತನವಾದ ಬಗ್ಗೆ ಸ್ವಪನ್ ರಾಯ್ ಎನ್ನುವವರು ನೀಡಿದ್ದ ದೂರಿನ ಆಧಾರದ ಮೇಲೆ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿದೆ.
ದೂರಿನ ನಂತರ, ಪೊಲೀಸರು ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು ಮತ್ತು ಕಾರನ್ನು ದೆಹಲಿಯ ಹೊರಭಾಗದಲ್ಲಿರುವ ಗೋಡೌನ್ನಲ್ಲಿ ಪತ್ತೆಹಚ್ಚಲಾಯಿತು, ಅಲ್ಲಿ ಜನವರಿ 17 ಮತ್ತು 18 ರ ಮಧ್ಯರಾತ್ರಿ ದಾಳಿ ನಡೆಸಲಾಯಿತು. ನಾಲ್ವರು ಆರೋಪಿಗಳು ಭಾಗಗಳನ್ನು ಕತ್ತರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು.(ಏಜೆನ್ಸೀಸ್)