More

    ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ

    ಬೆಂಗಳೂರು: ಇತ್ತೀಚೆಗೆ ನಡೆದ ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಪಕ್ಕದಲ್ಲಿ ಮಲಗಿದ್ದ ಎಂಟು ದಿನಗಳ ಹಸುಗೂಸು ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಗುವಿನ ಹಂಬಲದಿಂದ ಮಹಿಳೆ ಮಗುವನ್ನು ಕದ್ದಿರುವುದು ತನಿಖೆ ವೇಳೆ ಗೊತ್ತಾಗಿದೆ. ಮಗು ಕಳವು ಪ್ರಕರಣ ಸುಖಾಂತ್ಯ ಕಂಡಿದ್ದು, ವಿವಿಪುರ ಪೊಲೀಸರು ಮಗುವನ್ನು ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಮಗು ಕಳವು ಮಾಡಿದ್ದ ರಾಮನಗರ ಮೂಲದ ದಿವ್ಯಾರಶ್ಮಿ (29) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏ.15ರಂದು ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಪ್ರಸನ್ನ ಹಾಗೂ ಸುಮಾ ದಂಪತಿಯ ಮಗುವನ್ನು ದಿವ್ಯಾರಶ್ಮಿ ಕಳವು ಮಾಡಿದ್ದಳು. ರಾಮನಗರದ ಜಿಲ್ಲೆ ಮಾಗಡಿ ತಾಲೂಕಿನ ಐಜೂರಿನ ನಿವಾಸಿ ಆರೋಪಿ ದಿವ್ಯಾರಶ್ಮಿ ಪತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಜತೆಗೆ, ಕೆಲ ತಿಂಗಳ ಹಿಂದಷ್ಟೇ ಗರ್ಭಪಾತವಾಗಿ ಮಗು ಕೂಡ ಮೃತಪಟ್ಟಿತ್ತು. ಹೀಗಾಗಿ ಮಗುವಿನ ಹಂಬಲದಲ್ಲಿದ್ದ ದಿವ್ಯಾರಶ್ಮಿ ಮಗು ಕಳವು ಮಾಡಲು ತೀರ್ಮಾನಿಸಿದ್ದಳು. ಏ.14ರಂದು ಈಕೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರ ಸಂಬಂಧಿಕರ ಸೋಗಿನಲ್ಲಿ ಬೆಳಗ್ಗೆ ಒಳಗಡೆ ಬಂದಿದ್ದಳು. ಆದರೆ, ಹೊರಗಡೆ ಹೋಗಿರಲಿಲ್ಲ. ಏ.15ರಂದು ಮುಂಜಾನೆ ತಾಯಿ-ಮಗು ವಾರ್ಡ್‌ನಲ್ಲಿ ಎಲ್ಲರೂ ಮಲಗಿದ್ದ ವೇಳೆ ಸುಮಾ ಪಕ್ಕದಲ್ಲಿದ್ದ ಮಗುವನ್ನು ತೆಗೆದುಕೊಂಡು ಬ್ಯಾಗ್‌ನಲ್ಲಿ ಇರಿಸಿಕೊಂಡು ಹೊರಹೋಗಿದ್ದಳು. ಬಸ್ ಮೂಲಕ ಐಜೂರು ತಲುಪಿದ್ದಳು.

    ಇದನ್ನೂ ಓದಿ: ಶೆಟ್ಟರ್ ಜತೆ ಗುರುತಿಸಿಕೊಳ್ಳದಂತೆ ಪಕ್ಷದವರಿಗೆ ಬಿಜೆಪಿ ಹೈಕಮಾಂಡ್ ಸೂಚನೆ; ಜನ ಸೇರಿಸಲು ಪರದಾಟ?

    ಗಂಡ ಮೃತಪಟ್ಟ ಬಳಿಕ ದಿವ್ಯಾ ಒಬ್ಬಳೇ ವಾಸಿಸುತ್ತಿದ್ದು, ತನ್ನದೇ ಮಗು ಎಂದು ಅಕ್ಕ-ಪಕ್ಕದ ಮನೆಯವರಿಗೆ ಹೇಳಿಕೊಂಡಿದ್ದಳು. ಅಲ್ಲದೆ, ಮಗುವಿಗೆ ತಾನೇ ಹಾಲುಣಿಸಿ ಆರೈಕೆ ಮಾಡುತ್ತಿದ್ದಳು. ಮಗು ಸಾಕುವ ಉದ್ದೇಶಕ್ಕಾಗಿಯೇ ಕಳವು ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾಳೆ.

    600ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಪರಿಶೀಲನೆ

    ತಿಪಟೂರು ತಾಲೂಕಿನ ಮಡೇನೂರು ಮೂಲದ ಸುಮಾ ಏ.15ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮಗುವಿಗೆ ಹಾಲುಣಿಸಿ ತನ್ನ ಪಕ್ಕದಲ್ಲಿಯೇ ಮಲಗಿಸಿಕೊಂಡು ನಿದ್ರೆಗೆ ಜಾರಿದ್ದರು. ಅರ್ಧ ಗಂಟೆ ಬಳಿಕ ಎಚ್ಚರವಾದಾಗ ಮಗು ಕಂಡಿರಲಿಲ್ಲ. ಈ ಕುರಿತು ಮಗುವಿನ ತಂದೆ ಪ್ರಸನ್ನ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಮಿರ್ಜಾ ಅಲಿ, ಪಿಎಸ್‌ಐಗಳಾದ ಸಿ.ರಾಜೇಂದ್ರ ಪ್ರಸಾದ್, ಅಕ್ಷತಾ ಎಫ್. ಕುರಕುಂದಿ ನೇತೃತ್ವದ ತಂಡ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿತ್ತು.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮೆರಾವೊಂದರಲ್ಲಿ ಮಗುವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು. ಅದನ್ನು ಆಧರಿಸಿ ವಾಣಿವಿಲಾಸ, ವಿಕ್ಟೋರಿಯಾ ಆಸತ್ರೆಗಳ ಸುತ್ತಮುತ್ತ, ಕೆ.ಆರ್. ಮಾರ್ಕೆಟ್ ಸೇರಿ ಸುಮಾರು 600ಕ್ಕೂ ಅಧಿಕ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಜತೆಗೆ, ಏ.15ರಂದು ಮುಂಜಾನೆ ಆಸ್ಪತ್ರೆಯಲ್ಲಿ ಬಳಕೆಯಾಗಿದ್ದ ಮೊಬೈಲ್​ಫೋನ್​ ಕರೆಗಳ ಸಿಡಿಆರ್ ಪರಿಶೀಲಿಸಿದಾಗ ಅಂತಿಮವಾಗಿ ಅನುಮಾನದ ಮೇರೆಗೆ ಒಂದು ನಂಬರ್ ಸುಳಿವು ನೀಡಿತ್ತು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶೋಧಿಸಿದಾಗ ದಿವ್ಯಾರಶ್ಮಿ ಮನೆ ವಿಳಾಸ ಪತ್ತೆಯಾಗಿತ್ತು. ಬಳಿಕ ಆಕೆಯ ಹಿನ್ನೆಲೆಯಲ್ಲಿ ಆಕೆಯ ಐಜೂರಿನ ಮನೆ ಬಳಿ ತೆರಳಿ, ಸ್ಥಳೀಯರಿಂದ ಕೆಲವೊಂದು ಮಾಹಿತಿ ಸಂಗ್ರಹಿಸಲಾಗಿತ್ತು. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ಮಚ್ಚೆಯಿಂದ ಗುರುತಿಸಿದ ತಾಯಿ: ಜನಿಸುವ ವೇಳೆ ಮಗುವಿನ ಎಡ ಕೈಯಲ್ಲಿ ಒಂದು ಮಚ್ಚೆ ಇತ್ತು. ಆರೋಪಿತೆ ದಿವ್ಯಾರಶ್ಮಿಯಿಂದ ಮಗುವನ್ನು ರಕ್ಷಿಸಿ, ತಾಯಿಗೆ ಒಪ್ಪಿಸಲಾಗಿತ್ತು. ಆಗ ತಾಯಿ ಸುಮಾ ತನ್ನ ಮಗುವಿನ ಕೈಯಲ್ಲಿದ್ದ ಮಚ್ಚೆಯನ್ನು ಗುರುತಿಸಿ ಇದು ತನ್ನದೇ ಮಗು ಎಂದು ಪೊಲೀಸರಿಗೆ ತಿಳಿಸಿದರು.

    ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts