ಹಾಸನ: ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ದೈತ್ಯ ಗಾತ್ರದ ಕಾಡಾನೆ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಆನೆಯು ಮನೆಗಳ ಅಕ್ಕಪಕ್ಕದಲ್ಲೇ ಗಾಂಭೀರ್ಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ಕಾಡು ಆನೆಗಳ ಹಾವಳಿ ಮಲೆನಾಡು ಭಾಗದಲ್ಲಿ ಹೆಚ್ಚಿದ್ದು, ಈ ಭಾಗದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಲಾರಿಯೊಂದರ ಮೇಲೆ ಕಾಡಾನೆ ದಾಳಿ
ಕೆಲವು ದಿನಗಳ ಹಿಂದೆ ಕೆಟ್ಟು ನಿಂತಿದ್ದ ಲಾರಿಯೊಂದರ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಟಾರ್ಪಲ್ ಕಿತ್ತೆಸೆದು ರಂಪಾಟ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರಿನಲ್ಲಿ ನಡೆದಿತ್ತು.
ಆಹಾರ ಅರಸಿ ಆಗಾಗ್ಗೆ ಆನೆಗಳು ಕಾಡಿನಿಂದ ರಸ್ತೆಗಿಳಿದು ರಂಪಾಟ ನಡೆಸುತ್ತವೆ. ಕಬ್ಬು ತುಂಬಿದ ಲಾರಿಗಳಿಗಾಗಿ ಆನೆಗಳು ರಸ್ತೆಗೆ ಬರುತ್ತಿರುವುದರಿಂದ ನಿತ್ಯವೂ ವಾಹನ ಸವಾರರು ಇಲ್ಲಿ ಹೈರಾಣಾಗಿದ್ದಾರೆ.
ಅಧ್ಯಯನಕ್ಕೆ ತಜ್ಞರ ಸಮಿತಿ
ಇತ್ತೀಚೆಗೆಷ್ಟೇ ಈಶ್ವರ ಖಂಡ್ರೆ ಅವರು ಆನೆ ದಾಳಿ ತಡೆಯಲು ಇಲಾಖೆಯಿಂದ ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದೇವೆ. ಆನೆ ದಾಳಿಯಿಂದ ಜನರ ಸಾವಿನ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚನೆ ಮಾಡಲಾಗುತ್ತಿದೆ. ವರದಿ ಸಂಗ್ರಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರಮುಖವಾಗಿ ಆನೆ ಕಾರಿಡಾರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ತತ್ಕ್ಷಣ ಯಾವುದೇ ಕೆಲಸ ಆಗುವುದಿಲ್ಲ. ಆನೆ ದಾಳಿ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಸಲಹೆ ಬಂದಿದೆ ಎಂದು ತಿಳಿಸಿದರು.