ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸೋಮವಾರ ಸಂಜೆ 2 ಗಂಟೆ ಕಾಲ ಗುಡುಗು-ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು. ವಿಪರೀತ ಗಾಳಿ ಬೀಸಿದ್ದರಿಂದ ವಿವಿಧೆಡೆ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದವು. ಪಟ್ಟಣದ ಇಂದಿರಾನಗರ, ಬಸವೇಶ್ವರ ನಗರದ 2 ಕಡೆ ಮರಗಳು ಧರೆಗುರುಳಿದವು. ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಸವೇಶ್ವರ ನಗರದ ಮುಲ್ಲಾನವರ ಮನೆ ಮುಂದಿನ ಮರ ಕಾರಿನ ಶೆಡ್ ಮೇಲೆ ಬಿದ್ದು ಕೆಲ ವಸ್ತುಗಳು ಹಾನಿಗೀಡಾಗಿವೆ. ಪೊಲೀಸ್ ಠಾಣೆ ಹತ್ತಿರದ ಶಿಗ್ಲಿ ರಸ್ತೆಯಲ್ಲಿನ ಬೇವಿನಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಮರದ ಜತೆಗೆ ವಿದ್ಯುತ್ ಕಂಬವೂ ನೆಲಕ್ಕುರುಳಿದೆ.
ತಾಲೂಕಿನ ಶಿಗ್ಲಿ, ರಾಮಗಿರಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಸೂರಣಗಿ, ಬಡ್ನಿ, ಬಟ್ಟೂರ, ಆದ್ರಳ್ಳಿ, ಯಳವತ್ತಿ ಗ್ರಾಮಗಳಲ್ಲಿಯೂ ಮಳೆಯಾಗಿದೆ. ಜಮೀನುಗಳಲ್ಲಿನ ಕೃಷಿ ಹೊಂಡ, ಬದುವುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದೆ. ರೋಹಿಣಿ ಮಳೆ ಮೊದಲ ದಿನವೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.