ಗುಂಡ್ಲುಪೇಟೆ : ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಬಗ್ಗೆ ವಿಜಯವಾಣಿ ಬುಧವಾರ ಪ್ರಕಟವಾದ ‘ಬಿಗಡಾಯಿಸಿದ ನೀರಿನ ಸಮಸ್ಯೆ’ ವಿಶೇಷ ವರದಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊಳವೆ ಬಾವಿ ಕೊರೆಸಲಾರಂಭಿಸಿದೆ. ವರದಿಯ ಬಗ್ಗೆ ಗ್ರಾಮಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಂದ ಸ್ವತಃ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಕೂಡಲೇ ಕೊಳವೆಬಾವಿ ಕೊರೆಸುವಂತೆ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಗ್ಗಳ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮಧುಸೂದನ್ ತಿಳಿಸಿದ್ದಾರೆ. ವರದಿ ಬಂದ ಕೂಡಲೇ ಕೊಳವೆ ಬಾವಿ ಕೊರೆಸುತ್ತಿರುವ ಬಗ್ಗೆ ಸಂತಸಗೊಂಡ ಗ್ರಾಮಸ್ಥರು ವಿಜಯವಾಣಿಗೆ ಧನ್ಯವಾದ ತಿಳಿಸಿದ್ದಾರೆ.