ಕೆ.ಆರ್.ಪೇಟೆ: ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ದರೋಡೆಕಾರರ ಗುಂಪನ್ನು ತಡೆಯಲು ಯತ್ನಿಸಿದ ಸೆಕ್ಯುರಿಟಿ ಗಾರ್ಡ್ಗೆ ಚಾಕುವಿನಿಂದ ಇರಿದು ಭಾನುವಾರ ಮಧ್ಯರಾತ್ರಿ ಗಾಯಗೊಳಿಸಿದ್ದು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಮನು(30) ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದವ.
ಡಿಸಿಸಿ ಬ್ಯಾಂಕ್ ಶಾಖೆಗೆ ಮುಸುಕುಧಾರಿಗಳಾಗಿದ್ದ ಮೂವರು ದರೋಡೆಕೋರರು ನುಗ್ಗಲು ಯತ್ನಿಸಿದ್ದಾರೆ. ಇದೆ ವೇಳೆ ಕರ್ತವ್ಯನಿರತನಾಗಿದ್ದ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ದರೋಡೆಕೋರರನ್ನು ತಡೆದು, ಕಿರುಚಿಕೊಂಡಿದ್ದಾರೆ. ಇದರಿಂದ ವಿಚಲಿತರಾದ ದರೋಡೆಕೋರರು ಸೆಕ್ಯುರಿಟಿ ಗಾರ್ಡ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಇಲ್ಲಿನ ಕಿರುಚಾಟದಿಂದ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ದರೋಡೆಕಾರರ ಗುಂಪು ಪರಾರಿಯಾಗಿದೆ.
ಅಸ್ವಸ್ಥಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ಅವರನ್ನು ಗ್ರಾಮಸ್ಥರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಸೆಕ್ಯುರಿಟಿ ಗಾರ್ಡ್ ಮನು ಅವರನ್ನು ಭೇಟಿಯಾದ ಡಿಸಿಸಿ ಬ್ಯಾಂಕ್ ಅಧಿಕಾರಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ನಂತರ ಗ್ರಾಮಾಂತರ ಪೋಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಡಿಸಿಸಿ ಬ್ಯಾಂಕ್ ಮತ್ತು ವಿಎಸ್ಎಸ್ಎನ್ ಬ್ಯಾಂಕ್ ಶಾಖೆಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಿಸಬೇಕು ಎಂದು ಮನವಿ ಮಾಡಿದ್ದಾರೆ.
ಚಾಕು ಇರಿತಕ್ಕೊಳಗಾದ ಸೆಕ್ಯುರಿಟಿ ಗಾರ್ಡ್ ಮನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.