ಬೆಂಗಳೂರು: ರಾಜ್ಯದಲ್ಲಿ ಬಿಸಿಲು ಹೆಚ್ಚಳ ಬಗ್ಗೆ ಹಿಂದೆಯೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ಕೊಟ್ಟಿತ್ತು. 1960ರಿಂದ 1990ರವರೆಗೆ ಹಾಗೂ 1997ರಿಂದ 2017ರವರೆಗೆ ಹವಾಮಾನದಲ್ಲಿ ಏನಲ್ಲಾ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಗಂಡಿಸಿ ಅಧ್ಯಯನ ನಡೆಸಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು. ನಂತರ, 30 ವರ್ಷ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಅಧ್ಯಯನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ,ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿತ್ತು.
ಮುಂದಿನ ಕೆಲ ವರ್ಷದಲ್ಲಿ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹವಾಮಾನದ ಮೇಲೆ ಮಾನವ ಚಟುವಟಿಕೆ ಪ್ರಭಾವ, ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಳವಾಗುತ್ತಿದೆ.ಈಗಿನ ಹವಾಮಾನ ಬದಲಾವಣೆ ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ. ಜಾಗತಿಕ ತಾಪಮಾನ ಹೈಡ್ರಾಲಿಕ್ ಚಕ್ರಗಳಲ್ಲಿನ ಬದಲಾವಣೆಗಳು, ಐಸ್ ಮತ್ತು ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟ ಹೆಚ್ಚಳ, ಬರ, ಉಷ್ಣತೆ, ಬಿಸಿಗಾಳಿ, ಮಳೆಗಾಲ ಅವಧಿ ಸೇರಿ ಇತರೆ ಅಂಶ ಬದಲಾವಣೆಯಾಗುತ್ತಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ವರದಿಯನ್ನು ಸರ್ಕಾರಗಳು ಕಡೆಗಣಿಸಿವೆ.
ರಾಜ್ಯದಲ್ಲಿ 500 ಹೀಟ್ವೇವ್ ಕೇಸ್: ಇಬ್ಬರು ಮೃತ
ಕೋಟ್:
ಬರಗಾಲದಿಂದ ಮಣ್ಣಿನಲ್ಲಿ ತೇವಾಂಶ ಕೊರತೆ, ಕೆರೆ-ಗುಂಟೆಗಳಲ್ಲಿ ನೀರು ಬರಿದಾಗಿರುವುದು, ತೇವಾಂಶ ಭರಿತ ಮೋಡ ಇಲ್ಲದಿರುವುದು, “ಎಲ್ ನಿನೋ’ ಪ್ರಬಾವ ಸೇರಿ ಇತರ ಕಾರಣಗಳಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಳವಾಗುತ್ತಿದೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ.ಈ ಬಾರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ.
ಡಾ.ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞರು.