ತಿಪಟೂರು : ಮಳೆಯ ಆರ್ಭಟಕ್ಕೆ ಮತ್ತಿಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಪೈಕಿ ಒಂದು ಕೊಠಡಿಯ ಛಾವಣಿ ಗುರುವಾರ ರಾತ್ರಿ ಕುಸಿದಿದೆ.
ಶಿಥಿಲಾವಸ್ಥೆ ತಲುಪಿದ್ದ ಶಾಲಾ ಕೊಠಡಿಗಳನ್ನು ನವೀಕರಿಸಿ ಎಂದು ಗ್ರಾಮಸ್ಥರ ಸಭೆಯಲ್ಲಿ ತೀರ್ಮಾನಿಸಿದ್ದ ಶಾಲೆಯ ಎಸ್.ಡಿ.ಎಂ.ಪಿ. ಅಧ್ಯಕ್ಷ ನಾಗರಾಜು, ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಸಕರಿಗೆ ಒಂದು ವರ್ಷದ ಹಿಂದೆಯೇ ಶಾಲೆಯ ದುಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದರು. ವಿಷಯ ತಿಳಿದ ಶಾಸಕ ಬಿ.ಸಿ.ನಾಗೇಶ್, ಶಾಲಾ ಕೊಠಡಿ ದುರಸ್ಥಿಗೆ ಹೆಚ್ಚು ಅನುದಾನ ಬರುವುದು ಅನುಮಾನ, ಸದ್ಯದಲ್ಲೇ ಹೊಸ ಕಟ್ಟಡಕ್ಕೆ ಅನುಮೋದನೆ ಪಡೆಯಲಾಗುವುದು ಎಂದು ಹೇಳಿ ಕಳಿಸಿದ್ದರು.
ಸ್ಥಳ ಪರಿಶೀಲಿಸಿದ್ದ ಇಂಜಿನಿಯರ್ಗಳು ದುರಸ್ಥಿ ಬದಲು ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ ಎಂದು ಹೇಳಿ ಹೋಗಿದ್ದು ಬಿಟ್ಟರೆ ಸಮಸ್ಯೆಯನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ ಒಟ್ಟು 35 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು, ಸದ್ಯಕ್ಕೆ ಕರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ಹೆಚ್ಚಿನ ಸಮಸ್ಯೆ ಆಗಿಲ್ಲ. ಆದರೆ ಬಹುಷಃ ಆಗಸ್ಟ್ ಮೊದಲ ವಾರದಲ್ಲಿ ಶಾಲೆಗಳ ಪುನಾರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು. ಅಷ್ಟರೊಳಗೆ ಕೊಠಡಿ ದುರಸ್ತಿ ಮಾಡುತ್ತಾರೋ. ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಾರೋ ಕಾದು ನೊಡಬೇಕಿದೆ.
ಶಾಲೆಯ ದುಸ್ಥಿತಿ ಬಗ್ಗೆ ವರ್ಷದ ಹಿಂದೆಯೆ ಶಾಸಕರು ಸೇರಿ ತಾಲೂಕು ಆಡಳಿತಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದೆವು. ಮೊದಲು ದುರಸ್ಥಿ ಮಾಡುತ್ತೇವೆ ಎಂದವರು, ಕಡೆಗೆ ಹೊಸ ಕಟ್ಟಡ ಕಟ್ಟುವ ಭರವಸೆ ನೀಡಿದ್ದರು. ಆದರೆ ಇದ್ಯಾವುದೂ ನೆರವೇರಿಲ್ಲ. ಶಾಲೆಯಲ್ಲಿ ಮಕ್ಕಳಿದ್ದ ಸಂದರ್ಭ ಕುಸಿದಿದ್ದರೆ ಹೆಚ್ಚಿನ ಅನಾಹುತ ಆಗುತ್ತಿತ್ತು. ಈಗಲಾದರೂ ಸಂಬಂಧಪಟ್ಟವರು ಶಾಲೆ ಬಗ್ಗೆ ಗಮನ ಕೊಡಲಿ.
ನಾಗರಾಜು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮತ್ತಿಘಟ್ಟಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅನುದಾನ ಇಲ್ಲದ ಕಾರಣ ಸ್ಥಳೀಯ ಗ್ರಾಮಪಂಚಾಯಿತಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದೇನೆ. ದುರಸ್ಥಿ ಅಥವಾ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.
ಬಿ.ಜೆ.ಪ್ರಭುಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ತಿಪಟೂರು