ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಬುಧವಾರ ಸಂಜೆ ಸುರಿದ ಗಾಳಿ ಮಳೆಗೆ ಕೆಲವೆಡೆ ಬಾಳೆ ಗಿಡ ನೆಲಕಚ್ಚಿದೆರೆ, ಸಾಕಷ್ಟು ಮರಗಳು ಧರೆಗುರುಳಿವೆ.
ನಗರದಲ್ಲಿ ಸಂಜೆ 4 ಗಂಟೆ ಆರಂಭವಾದ ಮಳೆ ಒಂದು ಗಂಟೆ ಕಾಲ ಎಡೆಬಿಡದೆ ಸುರಿಯಿತು. ಈ ವೇಳೆ ದ್ವಿಚಕ್ರವಾಹನ ಸವಾರರು ಪರದಾಡುವಂತಾಯಿತು.
ರೈಲ್ವೆ ನಿಲ್ದಾಣ, ಡಿ.ಕ್ರಾಸ್, ಜಾಲಪ್ಪ ಕಾಲೇಜು ರಸ್ತೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ಮಧುರೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಾರಿ ಮಳೆಯಾಗಿದೆ.
ತಾಲೂಕಿನ ದೊಡ್ಡಬೆಳವಂಗಲದ ಸರ್ಕಾರಿ ಶಾಲೆಯ ಬಳಿ ಇದ್ದ ಮರ ಗಾಳಿ ಮಳೆಗೆ ಬಿದ್ದು, ವಿದ್ಯುತ್ ಕಂಬ ಮುರಿದಿವೆ.
ಬಿರುಗಾಳಿ ಮಳೆಗೆ ದೊಡ್ಡಬೆಳವಂಗಲದ ರಾಜಣ್ಣ ಅವರ ಮನೆಯ ಛಾವಣಿ ಕುಸಿದಿದ್ದು, ಸೀಗೆ ಕಾಯಿ ಪುಡಿ ಮಾಡುವ ಯಂತ್ರ ನಾಶವಾಗಿದೆ. ದೊಡ್ಡಬೆಳವಂಗಲದಲ್ಲಿ ರೈತ ಲೋಕೇಶ್ ಅವರ ತೋಟದಲ್ಲಿ ನೂರಾರು ಬಾಳೆಗಿಡಗಳು ನೆಲಕಚ್ಚಿವೆ.