ಬೆಳಗಾವಿ: ಸುವರ್ಣ ವಿಧಾನಸೌಧ ಚಳಿಗಾಲ ಅಧಿವೇಶನ ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಹಮ್ಮಿಕೊಂಡಿದ್ದ ಮಹಾಮೇಳಾವ್ಗೆ ತಡೆಯುವ ಮೂಲಕ ಸರ್ಕಾರ ಬಿಸಿ ಮುಟ್ಟಿಸಿದೆ. ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸರ್ಕಾರದ ವಿರುದ್ಧ ಎಂಇಎಸ್ ಮುಖಂಡರು ಮಹಾಮೇಳಾವ್ ಆಯೋಜಿಸಿದ್ದರು. ಅಲ್ಲದೆ ಮೈದಾನದಲ್ಲಿ ರಾತ್ರೋರಾತ್ರಿ ನಿರ್ಮಿಸಿದ್ದ ವೇದಿಕೆಯನ್ನು ಪೊಲೀಸರು ತೆರವುಗೊಳಿಸಿದರು.
ಅಲ್ಲದೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವ್ಯಾಕ್ಸಿನ್ ಡಿಪೋ ಸುತ್ತಮುತ್ತ 144ಸೆಕ್ಷನ್ ಜಾರಿಗೊಳಿಸಿದ್ದಾರೆ.
ಮತ್ತೊಂದೆಡೆ ಜಿಲ್ಲೆಯ ಗಡಿ ಪ್ರವೇಶಿಸಲು ಮುಂದಾದ ಮಹಾರಾಷ್ಟ್ರದ ಶಿವಸೇನೆ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಒಟ್ಟಿನಲ್ಲಿ ನಾಡದ್ರೋಹಿ ಕೆಲಸ ಮಾಡುವ ಎಂಇಎಸ್ಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ನಗರದಲ್ಲಿ 144 ಸೆಕ್ಸೆನ್ ಜಾರಿಯಲ್ಲಿದ್ದರೂ ಎಂಇಎಸ್ ಮಹಾಮೇಳಾವ್ಗೆ ಆಯೋಜನೆ ಮಾಡಿದ್ದರು. ಆದರೆ ಇದಕ್ಕೆ ನಿರ್ಬಂಧ ಹಾಕಲಾಗಿದೆ. ಎಂಇಎಸ್ನವರು ಟಿಳಕವಾಡಿ ಪೊಲೀಸ್ ಠಾಣೆಗೆ ಮಹಾಮೇಳಾವ್ ನಡೆಸುವ ಬಗ್ಗೆ ಅರ್ಜಿ ಕೊಟ್ಟಿದ್ದರು. ಆ ಅರ್ಜಿಯನ್ನ ತಿರಸ್ಕಾರ ಮಾಡಲಾಗಿದೆ. ಅಲ್ಲದೆ, ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ಇಲ್ಲ. ವೇದಿಕೆ ನಿರ್ಮಿಸಲು ಹೇಳಿದವರ ಬಗ್ಗೆ ವಿಚಾರಣೆ ಮಾಡುತ್ತೇವೆ. ಸಭೆ ಮಾಡದ ಕಾರಣ ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಿಲ್ಲ. ಸಭೆ ಮಾಡಲು ಅಕ್ರಮ ಕೂಟ ರಚಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ವದಂತಿಗೆ ಯಾರು ಕಿವಿ ಕೊಡಬೇಡಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.